ಜಕಾರ್ತಾ, ಆಗಸ್ಟ್ 29: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ 200 ಮೀಟರ್ ಸ್ಪರ್ಧೆಯಲ್ಲಿ ಅನರ್ಹಗೊಳ್ಳಲು ಕಾರಣ ಅವರು ಒತ್ತಡಕ್ಕೀಡಾಗುವಂತೆ ಮಾಡಲಾಗಿದ್ದ ಕಾಮೆಂಟ್ ಅಂತೆ. ಹೀಗೆಂದು ಸ್ವತಃ ಹಿಮಾ ದಾಸ್ ಅವರೇ ಹೇಳಿಕೊಂಡಿದ್ದಾರೆ.
ಸೌಂಥಾಪ್ಟನ್ ಟೆಸ್ಟ್ : ಟೀಂ ಇಂಡಿಯಾದ ಸಂಭಾವ್ಯ XI
ವೈಯಕ್ತಿಕ ವಿಭಾಗದ ಸ್ಪರ್ಧೆಯಾದ 400 ಮೀ. ಓಟದಲ್ಲಿ ಹಿಮಾದಾಸ್ ಭಾರತಕ್ಕೆ ಬೆಳ್ಳಿಯ ಪದಕ ಗೆದ್ದಿದ್ದರು. ಆದರೆ ವೈಯಕ್ತಿಕ ವಿಭಾಗದ ಇನ್ನೊಂದು ಸ್ಪರ್ಧೆಯಾದ 200 ಮೀ. ಓಟದಲ್ಲಿ ಆರಂಭಿಕ ತಪ್ಪು (false start) ಗಾಗಿ ಹಿಮಾದಾಸ್ ಅನರ್ಹಗೊಂಡಿದ್ದರು. ಮತ್ತೆ 4X400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಹಿಮಾಗೆ ಬೆಳ್ಳಿ ಪದಕ ಲಭಿಸಿತ್ತು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
400 ಮೀ. ಮತ್ತು 200 ಮೀ. ಎರಡೂ ಓಟದ ಸ್ಪರ್ಧೆ ಮುಕ್ತಾಯದ ಬಳಿಕ ಫೇಸ್ಬುಕ್ ಲೈವ್ ವಿಡಿಯೋವೊಂದರಲ್ಲಿ ಮಾತನಾಡಿರುವ ದಾಸ್, ತಾನು 200 ಮೀಟರ್ ಓಟದಲ್ಲಿ ಅನರ್ಹಗೊಳ್ಳಲು ಕಾರಣ ಒತ್ತಡಕ್ಕೀಡಾಗುವಂತೆ ವಿನಾಕಾರಣ ದೂಷಿಸಿ ಮಾಡಿದ್ದ ಕಾಮೆಂಟ್ ಎಂದಿದ್ದಾರೆ.
'ಆದಿನ ನನ್ನ ಮೇಲೆ ಬಹಳ ಒತ್ತಡ ಹೇರಲಾಗಿತ್ತು. ನಿಮ್ಮೆಲ್ಲರಲ್ಲಿ ನಾನು ವಿನಂತಿಸಿಕೊಳ್ಳುವುದಿಷ್ಟೆ; ದಯವಿಟ್ಟು ಕ್ರೀಡಾಪಟುಗಳಿಗೆ ಒತ್ತಡ ಹೇರುವುದಕ್ಕೆ ಹೋಗಬೇಡಿ. ಅವರ ಪ್ರದರ್ಶನದ ಮೇಲೆ ಒತ್ತಡ ಬೀರುವಂತ ಕಾಮೆಂಟ್ ಕೊಡುವುದಕ್ಕೆ ಹೋಗಬೇಡಿ. ಕೆಲವು ಕಾಮೆಂಡ್ ಗಳಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅಂಥವುಗಳನ್ನು ತಡೆಹಿಡಿದಿಟ್ಟುಕೊಳ್ಳಿ' ಎಂದು ದಾಸ್ ವಿನಂತಿಸಿಕೊಂಡಿದ್ದಾರೆ. ಒತ್ತಡಕ್ಕೀಡಾದಾಗ ಕ್ರೀಡೆಯತ್ತ ಗಮನ ಹರಿಸೋದು ಕಷ್ಟ. ಅದೂ 100, 200 ಮೀ. ಓಟದಲ್ಲಿ ಆರಂಭ (ಗನ್ ಸ್ಟಾರ್ಟ್) ಮುಖ್ಯ. ಈ ವೇಳೆ ಏಕಾಗ್ರತೆ ಇಲ್ಲದಿದ್ದರೆ ತಪ್ಪಾಗುವ ಸಾಧ್ಯತೆಯಿರುತ್ತದೆ.
ದಾಸ್ ಇಲ್ಲಿ ಯಾರ ಹೆಸರನ್ನೂ ಸೂಚಿಸಿಲ್ಲ. ಆದರೆ ಅವರ ರಾಜ್ಯ ಅಸ್ಸಾಮಿನ 2-3 ಮಂದಿ ಒತ್ತಡಕ್ಕೀಡಾಗುವಂತೆ ಮಾಡಿದ್ದರು ಎಂದಷ್ಟೇ ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ ಸ್ಥಳೀಯ ಲೋಕಲ್ ಚಾನೆಲ್ ಒಂದು ಹಿಮಾ ದಾಸ್ ಅವರ 200 ಮೀ. ಓಟಕ್ಕೂ ಮುನ್ನ ಸುದ್ದಿ (ಕ್ಲಿಪ್) ಯೊಂದನ್ನು ಪ್ರಕಟಿಸಿತ್ತು. ಹಿಮಾ ದಾಸ್ ಅವರಿಂದ ಉದ್ದೀಪನ ಪರೀಕ್ಷೆಗಾಗಿ ಮೂತ್ರದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ದಾಸ್ ಉದ್ದೀಪನ ಸೇವಿಸಿರುವ ಸಾಧ್ಯತೆಗಳಿವೆ ಎಂಬಂತೆ ಅದರಲ್ಲಿ ಬಿಂಬಿಸಲಾಗಿತ್ತು. ಇದು ಪ್ರತಿಭಾನ್ವಿತ ಓಟಗಾರ್ತಿಗೆ ಸಹಜವಾಗೇ ನೋವನ್ನುಂಟು ಮಾಡಿತ್ತು.
'ನಮ್ಮ ದೇಶದ ಪ್ರತಿಭಾನ್ವಿತ ಓಟಗಾರ್ತಿಯೊಬ್ಬಳು ತನ್ನ ಮೇಲೆ ವಿನಾಕಾರಣ ಒತ್ತಡ ಉಂಟಾಗುವಂತೆ ಮಾಡಬೇಡಿ ಎಂದು ಬೇಡಿಕೊಳ್ಳುತ್ತಿದ್ದಾಳೆಂದರೆ ನಮ್ಮ ಪತ್ರಿಕೋದ್ಯಮಕ್ಕೇ ಇದು ನಾಚಿಕೆಯ ವಿಷಯ. ನಾವ್ಯಾಕೆ ಹತಾಶೆಗೀಡಾಗುವಂತೆ ಮಾಡಿ ಆ ಪ್ರತಿಭೆಯನ್ನು ಕೊಲ್ಲಬೇಕು?' ಎಂದು ಅಸ್ಸಾಂ ನ ಹಿರಿಯ ಪತ್ರಕರ್ತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.