
ನವದೆಹಲಿ, ಜುಲೈ 17: ಕೇವಲ 2 ವಾರಗಳ ಅಂತರದಲ್ಲಿ 3 ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದು ವಿಶ್ವದ ಗಮನ ಸೆಳೆದಿದ್ದ ಭಾರತದ ಬಂಗಾರದ ಓಟಗಾರ್ತಿ ಹಿಮಾ ದಾಸ್, ಮಾನವೀಯತೆಗಾಗಿ ಭಾರತೀಯರ ಮನ ಗೆದ್ದಿದ್ದಾರೆ. ಹಿಮಾ ತನ್ನ ತಿಂಗಳ ಸಂಬಳದ ಅರ್ಧದಷ್ಟು ಹಣವನ್ನು ಅಸ್ಸಾಂ ಪ್ರವಾಹ ಪೀಡಿತರಿಗೆ ಕೊಡುಗೆಯಾಗಿ ನೀಡಿದ್ದಾರೆ.
ಮಂಗಳವಾರ (ಜುಲೈ 16) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 19ರ ಹರೆಯದ ಹಿಮಾ, 'ನನ್ನ ಪುಟಾಣಿ ಕೊಡುಗೆಯನ್ನು ನೀಡಿದ್ದೇನೆ. ದೇಶದ ಉಳಿದವರೂ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಜನತೆಗೆ ನೆರವು ನೀಡಿ' ಎಂದು ಅಸ್ಸಾಂ ಫ್ಲಡ್ಸ್ ಹ್ಯಾಷ್ಟ್ಯಾಗ್ನೊಂದಿಗೆ ಬರೆದುಕೊಂಡಿದ್ದರು.
ಹಿಮಾ ದಾಸ್ ಇತ್ತೀಚೆಗೆ ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಕುಂಟೋ ಅಥ್ಲೆಟಿಕ್ಸ್ ಮೀಟ್ ಮತ್ತು ಪೊಝ್ನಾನ್ ಗ್ರ್ಯಾಂಡ್ಪ್ರಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದರು. ತಾನೇ ಬಡ ಕುಟುಂಬದಲ್ಲಿದ್ದರೂ ತನ್ನ ರಾಜ್ಯದ ಸಮಸ್ಯೆಗೆ ಮರುಗಿರುವ ದಾಸ್, ತಿಂಗಳ ಸಂಬಳದಲ್ಲಿ ನೆರವು ನೀಡಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ನಲ್ಬರಿಯಲ್ಲಿನ ಪಾಗ್ಲಾಡಿಯಾ ನದಿಯ ಪ್ರವಾಹದಿಂದಾಗಿ ಅಲ್ಲಿನ ಸುಮಾರು 133 ಗ್ರಾಮಗಳ 1,50,000 ಜನ ಸಮಸ್ಯೆಗೀಡಾಗಿದ್ದಾರೆ. ಭಾರತೀಯ ಸೇನೆ ಪ್ರವಾಹಕ್ಕೀಡಾಗಿರುವಲ್ಲಿಗೆ ನೆರವಿಗೆ ಧಾವಿಸಿದ್ದು, ಜನರನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವ ಕಾರ್ಯದಲ್ಲಿ ಕೈ ಜೋಡಿಸಿದೆ.