
ಪುಣೆ: 1959ರಲ್ಲಿ ಪ್ರತಿಷ್ಠಿತ 'ಹಿಂದ್ ಕೇಸರಿ' ಪ್ರಶಸ್ತಿ ಗೆದ್ದಿದ್ದ ಭಾರತದ ಖ್ಯಾತ ರಸ್ಲರ್ ಶ್ರೀಪತಿ ಖಂಚ್ನಾಲೆ ಸೋಮವಾರ (ಡಿಸೆಂಬರ್ 14) ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
'ವಯೋ ಸಹಜವಾಗಿ, ಕೊಲ್ಲಾಪುರದ ಡೈಮಂಡ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನನ್ನ ತಂದೆ ಸಾವನ್ನಪ್ಪಿದ್ದಾರೆ,' ಎಂದು ಖಂಚ್ನಾಲೆ ಅವರ ಪುತ್ರ ರೋಹಿತ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಶ್ರೀಪತಿ ಖಂಚ್ನಾಲೆ ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ನೀಡಲಾಗುವ ಶಿವ್ ಛತ್ರಪತಿ ಪ್ರಶಸ್ತಿಯೂ ದೊರೆತಿತ್ತು.
1959ರಲ್ಲಿ ದೆಹಲಿಯ ನ್ಯೂ ರೈಲ್ವೇ ಸ್ಟೇಡಿಯಂನಲ್ಲಿ ನಡೆದಿದ್ದ ರಸ್ಲಿಂಗ್ ಪಂದ್ಯದಲ್ಲಿ ಶ್ರೀಪತಿ ಖಂಚ್ನಾಲೆ ಅವರು ಆಗ ಹಾಲಿ ಚಾಂಪಿಯನ್ ಆಗಿದ್ದ ರುಸ್ತಮ್ ಇ ಪಂಜಾಬ್ ಬತ್ತಸಿಂಗ್ ಅವರನ್ನು ಸೋಲಿಸಿ 'ಹಿಂದ್ ಕೇಸರಿ' ಪ್ರಶಸ್ತಿ ಗೆದ್ದು ಹೆಚ್ಚು ಖ್ಯಾತರಾಗಿದ್ದರು.
ಭಾರತೀಯ ರಸ್ಲಿಂಗ್ ಕ್ಲೇತ್ರದಲ್ಲಿ 'ಹಿಂದ್ ಕೇಸರಿ' ಪ್ರಶಸ್ತಿಗೆ ತುಂಬಾ ಗೌರವವಿದೆ. ಖಂಚ್ನಾಲೆ ಅವರು ಮೂಲತಃ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಎಕ್ಸಂಬಾದವರು.