
ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಿಲೀನಗೊಳಿಸಲು ಗೃಹ ಸಚಿವಾಲಯ ಕ್ರೀಡಾ ಸಚಿವಾಲಯವನ್ನು ಒತ್ತಾಯಿಸಿದೆ. ಎರಡು ಪ್ರಶಸ್ತಿಗಳನ್ನು ಒಂದೇ ಪ್ರಶಸ್ತಿಯಾಗಿಸಲು ಗೃಹಸಚಿವಾಲಯ, ಕ್ರೀಡಾ ಸಚಿವಾಲಯಕ್ಕೆ ಸೂಚಿಸಿರುವುದಾಗಿ ವರದಿಯಾಗಿದೆ.
ಗೃಹ ಸಚಿವಾಲಯ ನೀಡಿದ ಸಲಹೆಗೆ ಬಹುಶಃ ಒಪ್ಪಬಹುದು. ಆದರೆ ಈ ಬಾರಿಯ ಪ್ರಶಸ್ತಿ ಮಾತ್ರ ಹಿಂದಿದ್ದಂತೆಯೇ ವಿತರಿಸಲಾಗುತ್ತದೆ ಎಂದು ಕ್ರೀಡಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಎರಡು ಪ್ರಶಸ್ತಿಗಳನ್ನು ವಿಲೀನಗೊಳಿಸಲು ಗೃಹ ಸಚಿವಾಲಯ ಎರಡು ಬಾರಿ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿತ್ತು ಎನ್ನಲಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಕಳೆದ ಜುಲೈ ಮತ್ತು ಸೆಪ್ಟೆಂಬರ್ ನಲ್ಲಿ ಗೃಹ ಸಚಿವಾಲಯ, ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ಅತ್ಯುನ್ನತ ಪ್ರಶಸ್ತಿಗಳನ್ನು ವಿಲೀನಗೊಳಿಸಲು ಒತ್ತಾಯಿಸಿತ್ತು. ಇದರ ಜೊತೆಗೆ ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿಸುವಂತೆಯೂ ಗೃಹ ಸಚಿವಾಲಯ ಸೂಚಿಸಿತ್ತು ಎಂದು ತಿಳಿದು ಬಂದಿದೆ.
'ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳ ಎರಡು ವಿಭಾಗಗಳನ್ನು ಹೊಂದಿರುವ ಕ್ರೀಡಾಪಟುಗಳಿಗೆ ಒಂದೇ ರಾಷ್ಟ್ರೀಯ ಪ್ರಶಸ್ತಿಯನ್ನು ರೂಪಿಸಬೇಕು. ವರ್ಷಗಳಲ್ಲಿ ನೀಡಲಾದ ಪ್ರಶಸ್ತಿಗಳು ಮಾರ್ಗಸೂಚಿಗಳಲ್ಲಿ ಸೂಚಿಸಲಾದ ಸಂಖ್ಯೆಗಿಂತ ಹೆಚ್ಚಿನದಾಗಿದೆ,' ಎಂದು ಗೃಹ ಸಚಿವಾಲಯದ ಪತ್ರದಲ್ಲಿ ಬರೆಯಲಾಗಿತ್ತು ಎಂದು ಹೇಳಲಾಗಿದೆ. ಪ್ರಶಸ್ತಿಗಳನ್ನು ಹೀಗೆ ವಿಲೀನಗೊಳಿಸುವುದೆಂದರೆ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕಡಿಮೆಗೊಳಿಸಿದಂತೆಯೇ ಸಮ.