ದೇಶದ ಹೆಮ್ಮೆಯ ಕ್ರೀಡಾಪಟುಗಳಲ್ಲಿ ಮೊದಲನೇ ಹೆಸರು ವಿಶ್ವ ಕಂಡ ಶ್ರೇಷ್ಠ ಹಾಕಿ ಪಟು ಮೇಜರ್ ಧ್ಯಾನ್ ಚಂದ್ ಅವರದ್ದು. ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ಶ್ರೇಯಸ್ಸು ಧ್ಯಾನ್ ಚಂದ್ಗೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ ಎರಡಲ್ಲ ಮೂರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದರು.
ಸ್ವಾತಂತ್ರ್ಯ ಪಡೆದು ಏಳು ದಶಕದ ಬಳಿಕವೂ ಒಲಿಂಪಿಕ್ಸ್ನಲ್ಲಿ ಪಡೆಯುವ ಬೆರಳೆಣಿಕೆಯ ಬೆಳ್ಳಿ ಅಥವಾ ಕಂಚಿನ ಪದಕವನ್ನು ಮುಂದಿನ ಒಲಿಂಪಿಕ್ಸ್ಗೂ ನೆನಪಿಸಿಕೊಂಡು ಸಂಭ್ರಮಿಸುತ್ತೇವೆ. ಆದರೆ ಧ್ಯಾನ್ಚಂದ್ ಪಡೆ ಸತತವಾಗಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಗೆದ್ದು ತೋರಿಸಿತ್ತು.

1928ರ ಆ್ಯಮ್ಸ್ಟರ್ಡ್ಯಾಮ್, 1932ರ ಲಾಸ್ ಏಂಜಲೀಸ್ ಮತ್ತು 1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಭಾರತವು ಸತತ ಮೂರು ಒಲಿಂಪಿಕ್ ಹಾಕಿ ಚಿನ್ನದ ಪದಕ ಗೆಲ್ಲುವಲ್ಲಿ ಮುಖ್ಯ ಕಾರಣವಾಗಿದ್ದರು ಧ್ಯಾನ್ಚಂದ್. 1928ರ ಫೈನಲ್ನಲ್ಲಿ ಭಾರತ ಆತಿಥೇಯ ನೆದರ್ಲೆಂಡ್ಸ್ ತಂಡವನ್ನು 3-0 ಅಂತರದಿಂದ ಸೋಲಿಸಿತು ಈ ಚಿನ್ನದ ಪದಕದ ಸಾಧನೆ ಮಾಡಿದ್ದರೆ 1932ರ ಚಿನ್ನದ ಪದಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಊಹಿಸಲೂ ಸಾಧ್ಯವಾಗದಂತೆ 24-1 ಅಂತರದಿಂದ ಸೋಲಿಸಿ ಪದಕ ಗೆದ್ದಿತ್ತು. ಇನ್ನು 1936ರಲ್ಲಿ ಜರ್ಮನಿ ವಿರುದ್ಧ 8-1 ಗೋಲುಗಳಿಂದ ಫೈನಲ್ನಲ್ಲಿ ಮಣಿಸಿತು. ಒಟ್ಟಾರೆಯಾಗಿ, ಧ್ಯಾನ್ ಚಂದ್ 12 ಒಲಿಂಪಿಕ್ ಪಂದ್ಯಗಳನ್ನು ಆಡಿ 33 ಗೋಲುಗಳನ್ನು ಗಳಿಸಿದರು.
ಧ್ಯಾನ್ ಚಂದ್ ಜನಿಸಿದ್ದು ಆಗಸ್ಟ್ 29, 1905ರಲ್ಲಿ. ಸ್ಥಳ ಉತ್ತರ ಪ್ರದೇಶದ ಪ್ರಯಾಗ. ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. ಶಾಲೆಯಿಂದ ಬಹುಬೇಗ ಹೊರನೆಡೆದ ಧ್ಯಾನ್ ಚಂದ್ ತಮ್ಮ ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಈ ಮೂಲಕ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಹಾಕಿಯಲ್ಲಿನ ಪ್ರಾವಿಣ್ಯತೆ ಹಾಕಿ ಅಂಗಳಕ್ಕೆ ಕರೆತಂದಿತ್ತು.
ಬರ್ಲಿನ್ ಒಲಿಂಪಿಕ್ಸ್ನಲ್ಲಿ ಸ್ವತಃ ಹಿಟ್ಲರ್ ಧ್ಯಾನ್ ಚಂದ್ ಆಟಕ್ಕೆ ಮನಸೋತು ಉನ್ನತ ಹುದ್ದೆಯ ಆಮಿಷವನ್ನೊಡ್ಡಿ ತಮ್ಮ ಜರ್ಮನಿ ಪರವಾಗಿ ಸೇವೆ ಸಲ್ಲಿಸಲು ಮನವಿ ಮಾಡಿಕೊಂಡಿದ್ದರಂತೆ. ಆದರೆ ಈ ಮನವಿಯನ್ನು ಹಿಟ್ಲರ್ ನಯವಾಗಿ ತಿರಸ್ಕರಿಸಿ ದೇಶ ಪ್ರೇಮವನ್ನು ಮೆರೆದಿದ್ದರು. ದೇಶ ಕಂಡ ಹೆಮ್ಮೆಯ ಕ್ರೀಡಾಪಟು ಧ್ಯಾನ್ ಚಂದ್ ಅವರ ಹುಟ್ಟಿದ ದಿನವನ್ನು ಭಾರತದಲ್ಲಿ ಕ್ರೀಡಾದಿನನ್ನಾಗಿ ಆಚರಿಸಲಾಗುತ್ತದೆ. ಸ್ವಾತಂತ್ರ್ಯೋತ್ಸವದ ಈ ಸಂಭ್ರಮದಲ್ಲಿ ಸನಿಹದಲ್ಲಿ ದೇಶದ ಹೆಮ್ಮೆಯ ಕ್ರೀಡಾಪಟುವಿಗೊಂದು ಸಲಾಮ್ ಹೇಳೋಣ.