ಬರ್ಲಿನ್, ಜುಲೈ 13: ರಾಷ್ಟ್ರೀಯ ಮಟ್ಟದಲ್ಲಿ 50ಕ್ಕೂ ಹೆಚ್ಚು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 110ಕ್ಕೂ ಹೆಚ್ಚು ಪದಕ ಪಡೆದ ಈಜುಗಾರ್ತಿಯೊಬ್ಬರು ವಿದೇಶದಲ್ಲಿ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ.
ನಾಗ್ಪುರ್ ಪ್ಯಾರ ಈಜುಗಾರ್ತಿ ಕಾಂಚನಮಾಲ ಪಾಂಡೆ ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಆರ್ಥಿಕ ನೆರವು ಸಿಗದ ಕಾರಣ, ಬರ್ಲಿನ್ನಲ್ಲಿ ಭಿಕ್ಷೆ ಬೇಡಿದ ಘಟನೆ ನಡೆದಿದೆ.

ಪ್ಯಾರಾ ಒಲಿಂಪಿಕ್ಸ್ ಸಮಿತಿಯ ನಿರ್ಲಕ್ಷ್ಯದಿಂದಾಗಿ ಕಾಂಚನಮಾಲಗೆ ಈ ದುಃಸ್ಥಿತಿ ಒದಗಿದೆ. ಸಂಪೂರ್ಣ ಅಂಧತ್ವ ಹೊಂದಿರುವ ಎಸ್ -11 ಕೆಟಗೆರಿಯ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಾಂಚನಮಾಲ ಸೇರಿದಂತೆ ಐವರು ಸ್ಪರ್ಧಿಗಳು ಸ್ವಂತ ಹಣದಿಂದ ಜರ್ಮನಿಗೆ ತೆರಳಿದ್ದರು. ಜುಲೈ 3 ರಿಂದ 9ರ ತನಕ ನಡೆದ ಪಂದ್ಯಾವಳಿಯಲ್ಲಿ 200 ಮೀ ವೈಯಕ್ತಿಕ ಮಿಡ್ಲೇಯಲ್ಲಿ ಬೆಳ್ಳಿ ಪದಕ ಗೆದ್ದ ಕಾಂಚನಮಾಲ ಉಳಿದ ಸ್ಪರ್ಧೆಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಆದರೆ, ಕೈಲಿದ್ದ ಹಣ ಖರ್ಚಾಗಿದ್ದರಿಂದ ರೈಲಿನಲ್ಲಿ ಸಂಚರಿಸಲು ಸಾಧ್ಯವಾಗದೆ ದಂಡ ತೆತ್ತಿದ್ದಲ್ಲದೆ, ಭಿಕ್ಷೆ ಬೇಡುವ ಪರಿಸ್ಥಿತಿ ತಲುಪಿದ್ದಾರೆ.