ವಿಜಯನಗರ: ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಕೊರೊನಾ ವೈರಸ್ನ ತೀವ್ರತೆಗಳು ಹೆಚ್ಚಾಗುತ್ತಲೇ ಇದೆ. ಬುಧವಾರ ಮತ್ತೋರ್ವ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರು ಕೊರೊನಾ ಸೋಕಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ವೇಟ್ಲಿಫ್ಟಿಂಗ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದ ಕಿಚಡಿ ದಯಾನಂದ ಅವರು ಕೊರೊನಾ ಸೋಕಿಗೆ ಬಲಿಯಾಗಿದ್ದಾರೆ.
ಹೊಸಪೇಟೆಯ ನಿವಾಸಿಯಾಗಿದ್ದ ಕಿಚಡಿ ದಯಾನಂದ ವೇಟ್ ಲಿಫ್ಟರ್ ಆಗಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. 25 ದಿನಗಳ ಹಿಂದೆ ಕಾಶ್ಮೀರಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿ ವಾಪಾಸಾಗಿದ್ದರು. ಆದರೆ ವಾರದ ಹಿಂದೆ ಅವರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿತ್ತು ಎಂದು ಮಾಹಿತಿ ದೊರೆತಿದೆ.
ದಾವಣಗೆರೆಯ ಆಸ್ಪತ್ರೆಯೊಂದರಲ್ಲಿ ಕಿಚಡಿ ದಯಾನಂದ ಅವರು ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹತ್ತು ದಿನಗಳ ಹಿಂದೆಯಷ್ಟೇ ಕರ್ನಾಟಕ ಇನ್ನೋರ್ವ ಅಂತಾರಾಷ್ಟ್ರೀಯ ಕ್ರೀಡಾಪಟು ಇದೇ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದರು. ಕೊಡಗಿನ ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ಹಾಗೂ ಅಂಪಾಯರ್ ಮುಂಡಂಡ ಅನುಪಮಾ ಪುಚ್ಚಿಮಂಡ ಕೊರೊನಾ ವೈರಸ್ಗೆ ಪ್ರಾಣ ಕಳೆದುಕೊಂಡಿದ್ದರು.ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಬಳಿಕ ಪ್ರಾಣ ಕಳೆದುಕೊಂಡಿದ್ದರು.