ಮಂಗಳೂರು, ಡಿ.26: ಕೆಎಲ್ ರಾಹುಲ್ ನಾನು ಕೋಚಿಂಗ್ ಕೊಟ್ಟ ಆಟಗಾರರ ಪೈಕಿ ಅತ್ಯಂತ ಪ್ರಬುದ್ಧ ಆಟಗಾರ. ಸೋಲು ಗೆಲುವು ಸಮನಾಗಿ ಸ್ವೀಕರಿಸುತ್ತಿದ್ದ ಮೊದಲ ಇನ್ನಿಂಗ್ಸ್ ಸೊನ್ನೆ ಗಳಿಸಿದರೆ ಮುಂದಿನ ಇನ್ನಿಂಗ್ಸ್ ಶತಕ ಬಾರಿಸುವ ಛಾತಿ ಆತನಿಗಿದೆ. ಅದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾನೆ ಎಂದು ಕೆಎಲ್ ರಾಹುಲ್ ಅವರ ಮೊದಲ ಕೋಚ್ ಸ್ಯಾಮುಯಲ್ ಜಯರಾಜ್ ಮುತ್ತು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
11 ವರ್ಷವಿದ್ದಾಗ ಬೇಸಿಗೆ ಶಿಬಿರಕ್ಕೆ ಸೇರಿದ್ದ ಅಂಡರ್ 13 ತಂಡಕ್ಕೆ ಆಡುವಾಗ ನನ್ನ ಬಳಿ ಬಂದಿದ್ದ ಅಂದಿನಿಂದ ಇಂದಿನ ತನಕ ನನ್ನ ಸಲಹೆ ಮಾರ್ಗದರ್ಶನ ಪಡೆದುಕೊಂಡು ಬಂದಿದ್ದಾನೆ.
ವೆರಿ ಮೆಚ್ಯುರ್ಡ್ ಪರ್ಸನ್ :ಸಂತಸ ಬಂದಾಗ ಹಿಗ್ಗುವುದು ಓವರ್ ರಿಯಾಕ್ಟ್ ಮಾಡುವ ಪೈಕಿ ಅಲ್ಲ. ಸೋತಾಗ ಸಿಟ್ಟಾಗುವುದೂ ಇಲ್ಲ. ಒಬ್ಬ ವೃತ್ತಿಪರ ಆಟಗಾರನಿಗಿರಬೇಕಾದ ಕೌಶಲ್ಯ, ಜಾಣ್ಮೆ, ನಡವಳಿಕೆ ರಾಹುಲ್ ಗೆ ಚಿಕ್ಕವಯಸ್ಸಿನಿಂದಲೇ ಬಂದಿದೆ. ಇದಕ್ಕೆ ಆತನ ಪೋಷಕರಿಂದ ಪಡೆದುಕೊಂಡಿರುವ ಸಂಸ್ಕಾರವೂ ಕಾರಣ ಇರಬಹುದು ಎಂದು ಮುತ್ತು ಹೇಳಿದರು. [ಕೆಎಲ್ ರಾಹುಲ್ : ಮಂಗಳೂರಿನಿಂದ ಮೆಲ್ಬೋರ್ನ್ ತನಕ]

ರಾಹುಲ್ ಗೆಳೆಯರನ್ನು ಮರೆತಿಲ್ಲ: ಮಂಗಳೂರಿನಲ್ಲಿ ರಾಹುಲ್ ಜೊತೆ ಆಡುತ್ತಿದ್ದ ಸಿನಾನ್ ಅಬ್ದುಲ್ ಖಾದರ್, ನಿಶಿತ್ ರಾಜ್ ಇನ್ನೂ ಮಂಗಳೂರಿನಲ್ಲಿ ಆಡುತ್ತಾರೆ. ರಾಹುಲ್ ಮೊದಲಿಗೆ ಕೆಪಿಎಲ್ ಮಂಗಳೂರು ಯುನೈಟೆಡ್ ಪರ ಆಡುತ್ತಿದ್ದ. ಉಮೇಶ್ ಖಾರ್ವಿ, ವಿಲ್ಡನ್ ಕ್ರಾಸ್ಟೋ, ಮಹಮ್ಮದ್ ಆರಿಫ್, ಸಚಿನ್ ಶೆಣೈ ಹೀಗೆ ಕರಾವಳಿಯಿಂದ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅದರೆ, ರಾಹುಲ್ ನಿರಂತರವಾಗಿ ಯಶಸ್ಸು ಸಾಧಿಸಿದ ಫಲವೇ ಇಂದು ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಕಾರಣವಾಗಿದೆ.
ನಾವು ವಾಟ್ಸಪ್ ಮುಖಾಂತರ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಭಾರತ ತಂಡಕ್ಕೆ ಆಯ್ಕೆಯಾದ ಮೇಲೆ ಫೋನ್ ಮಾಡಿ ವಿಷಯ ತಿಳಿಸಿದ ತುಂಬಾ ಖುಷಿಯಾಗುತ್ತದೆ. ನಮ್ಮ ಶಿಬಿರದಿಂದ ಕಲಿತ ಹುಡುಗರು ಮೇಲೆ ಬಂದ ಮೇಲೆ ಎಷ್ಟೋ ಮಂದಿ ಕೋಚ್ ಗಳನ್ನು ಮರೆತು ಬಿಡುತ್ತಾರೆ. ಅದರೆ, ರಾಹುಲ್ ಆಗಲ್ಲ. ಎಲ್ಲರನ್ನು ಮಾತನಾಡಿಸುತ್ತಾನೆ, ಗೌರವಿಸುತ್ತಾನೆ.
ವಿಕೆಟ್ ಕೀಪರ್ ಆಗಿದ್ದ: ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾನೆ. ಆದರೆ, ಬ್ಯಾಟಿಂಗ್ ಗೆ ಹೆಚ್ಚಿನ ಗಮನ ಕೊಡುವಂತೆ ಸೂಚಿಸಿದೆ. ಅದರೆ, ವಿಕೆಟ್ ಕೀಪಿಂಗ್ ಪ್ಲಸ್ ಪಾಯಿಂಟ್ ಆಯಿತು. ಔಟ್ ಸೈಡ್ ದ ಆಫ್ ಸ್ಟಂಪ್ ಚೆಂಡು ಬಿಡುವುದನ್ನು ಕಲಿಸಿದ್ದು ಇದೇ ವಿಕೆಟ್ ಕೀಪಿಂಗ್ ಅವರಿಗೆ ಏಕಾಗ್ರತೆ, ತಾಳ್ಮೆ ಚೆನ್ನಾಗಿದೆ.

ಶೂನ್ಯದ ನಂತರ ಶತಕ: NITK ಸುರತ್ಕಲ್ ಮನೆ ಹತ್ತಿರ ಮೈದಾನವಿತ್ತು. ಹೀಗಾಗಿ ಪ್ರತಿನಿತ್ಯ ಮೈದಾನದಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದ. ಎಲ್ಲಾ ಮ್ಯಾಚ್ ಗಳಲ್ಲಿ ಶತಕ ಬಾರಿಸುತ್ತಿದ್ದ. ಶೂನ್ಯ ಹೊಡೆದ ಮರು ಇನ್ನಿಂಗ್ಸ್ ನಲ್ಲೇ ಶತಕ ಬಾರಿಸುವುದು ಅವರ ಸ್ಟೈಲ್ ಆಗಿತ್ತು. ಪ್ರತಿ ಪಂದ್ಯದಲ್ಲೂ ಚೆನ್ನಾಗಿ ಫರ್ಫಾಮೆನ್ಸ್ ನೀಡುತ್ತಿದ್ದ.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೋಗಿದ್ದಾಗ ಎರಡು ದ್ವಿಶತಕ ಬಾರಿಸಿದ್ದ. ಆಗ ರಾಹುಲ್ ದ್ರಾವಿಡ್ ಸಿಕ್ಕು ಪ್ರೋತ್ಸಾಹದ ಮಾತುಗಳನ್ನಾಡಿದರು. ಅಂಡರ್ 13, 15,17,19 ಹಾಗೂ 23 ತಂಡಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಅನೇಕ ಬಾರಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಪಡೆದುಕೊಂಡಿದ್ದಾನೆ.
ತಮಿಳುನಾಡು, ಆಂಧ್ರಪ್ರದೇಶ, ಹೈದರಾಬಾದ್ ವಿರುದ್ಧ ಶತಕ ಬಾರಿಸಿದ ನಂತರ ಅಂಡರ್ 19 ವಿಶ್ವಕಪ್ ಆಡಿದ ಭಾರತಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ.

ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಮುಖ್ಯವಾಗಿ ಕಾರಣವಾಗಿದ್ದು, ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ಪರ ಆಡುತ್ತಾ ಸತತ ಎರಡು ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದು ತುಂಬಾ ಖುಷಿ ಕೊಟ್ಟಿದೆ.
ದ್ರಾವಿಡ್ ರಂತೆ ರಾಹುಲ್ ಗೆ ತಾಳ್ಮೆಯಿದೆ: ದೊಡ್ಡ ಇನ್ನಿಂಗ್ಸ್ ಕಟ್ಟುವುದರಲ್ಲಿ ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯುವುದರಲ್ಲಿ ರಾಹುಲ್ ದ್ರಾವಿಡ್ ರನ್ನು ಕೆಎಲ್ ರಾಹುಲ್ ಹೋಲುತ್ತಾನೆ. ಹಿರಿಯ ಆಟಗಾರರ ವಿಡಿಯೋಗಳನ್ನು ನೋಡಿ ತನ್ನ ಆಟದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದ್ದ. ಸಚಿನ್ ಹಾಗೂ ದ್ರಾವಿಡ್ ಆಟದ ವಿಡಿಯೋ ಹೆಚ್ಚಾಗಿ ನೋಡುತ್ತಿದ್ದ.
ಆಸ್ಟ್ರೇಲಿಯಾ ಪರಿಸರ ಪರಿಚಯವಿದೆ. ಕಳೆದ ವರ್ಷ ಭಾರತ ಎ ತಂಡದ ಪರ ಆಡುತ್ತಾ ಅಲ್ಲಿನ ವಾತಾವರಣದ ಬಗ್ಗೆ ಪರಿಚಯ ಪಡೆದುಕೊಂಡಿದ್ದಾನೆ. ಹೀಗಾಗಿ ಟೆಸ್ಟ್ ನಲ್ಲಿ ಆಡಲು ಆತನಿಗೆ ಕಷ್ಟವಾಗಲಾರದು,
ಬೆಂಗಳೂರಿನಲ್ಲಿ ರಾಹುಲ್ ದ್ರಾವಿಡ್ ಆಲ್ಲದೆ, ಜಿಕೆ ಅನಿಲ್ ಕುಮಾರ್, ಸೋಮಶೇಖರ್ ಸಿರಗುಪ್ಪಿ, ಸನತ್ ಕುಮಾರ್ ಅವರು ಆತನಿಗೆ ನೆರವಾದರು. ರಾಹುಲ್ ಆಯ್ಕೆಯಿಂದ ಮಂಗಳೂರಿನ ಯುವ ಕ್ರಿಕೆಟರ್ ಗಳಿಗೆ ಹೆಚ್ಚಿನ ಸ್ಪೂರ್ತಿ ಸಿಕ್ಕಿದೆ ಎಂದು ಸ್ಯಾಮುಯಲ್ ತಮ್ಮ ಸಂತಸ ಹಂಚಿಕೊಂಡರು.