ಕಲ್ಮಾಡಿ, ಚೌಟಾಲ ಆಜೀವ ಅಧ್ಯಕ್ಷ ಆಯ್ಕೆ ಹಿಂಪಡೆದ ಒಲಿಂಪಿಕ್ಸ್ ಸಂಸ್ಥೆ
ನವದೆಹಲಿ, ಜ. 10: ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾ ಅವರನ್ನು ತನ್ನ ಆಜೀವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು (ಐಒಎ), ಆ ನಿರ್ಧಾರದಿಂದ ಹಿಂದೆ ಸರಿದಿದೆ.
ಈ ಬಗ್ಗೆ ಮಾತನಾಡಿರುವ ಐಒಎ ಅಧ್ಯಕ್ಷ ಎನ್. ರಾಮಚಂದ್ರನ್, "ಕಲ್ಮಾಡಿ, ಚೌಟಾಲಾ ಅವರ ಆಯ್ಕೆಯ ನಿರ್ಧಾರವನ್ನು ಹಿಂಪಡೆಲಾಗಿದೆ. ಈ ಬಗ್ಗೆ ಸಂಸ್ಥೆಯು ಯಾವುದೇ ಗೊತ್ತುವಳಿ ಮಂಡಿಸುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ತಿಂಗಳ 28ರಂದು ಚೆನ್ನೈನಲ್ಲಿ ನಡೆದಿದ್ದ ಐಒಎ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಈ ಇಬ್ಬರನ್ನು ಸಂಸ್ಥೆಯ ಆಜೀವ ಅಧ್ಯಕ್ಷರನ್ನಾಗಿಸಿ ಸರ್ವಾನುಮತದಿಂದ ಆರಿಸಲಾಗಿತ್ತು.
ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾ ಇಬ್ಬರೂ ಮಾಜಿ ಐಒಎ ಅಧ್ಯಕ್ಷರು. ಅವರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿದ್ದವರು. ಈ ಹಿನ್ನೆಲೆಯಲ್ಲಿ, ಅವರನ್ನು ಸಂಸ್ಥೆಯ ಆಜೀವ ಅಧ್ಯಕ್ಷರನ್ನಾಗಿಸಿದ್ದು ಕ್ರೀಡಾ ರಂಗದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು.
ತಕ್ಷಣವೇ ಎಚ್ಚೆತ್ತ ಕಲ್ಮಾಡಿ, ಐಒಎಯ ಈ ಗೌರವ ಸ್ಥಾನದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದರು. ಆದರೆ, ಚೌಟಾಲ ಹಿಂದೆ ಸರಿದಿರಲ್ಲಿಲ್ಲ.
ಏತನ್ಮಧ್ಯೆ, ಸಂಸ್ಥೆಯ ಈ ನಿರ್ಧಾರದ ಬಗ್ಗೆ ಕಿಡಿಕಾರಿದ್ದ ಕೇಂದ್ರ ಕ್ರೀಡಾ ಇಲಾಖೆ, ಇಬ್ಬರ ಆಯ್ಕೆ ರದ್ದುಗೊಳಿಸಬೇಕೆಂದು ಆಗ್ರಹಿಸಿತ್ತಲ್ಲದೆ, ಈ ಬಗ್ಗೆ ಡಿ. 30ರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿ ಐಒಎಗೆ ಶೋಕಾಸ್ ನೋಟಿಸನ್ನೂ ಜಾರಿಗೊಳಿಸಿತ್ತು. ಆದರೆ, ಇದಕ್ಕೆ ಉತ್ತರಿಸದ ಐಒಎ, ತನ್ನ ವಿವರಣೆಗಾಗಿ 15 ದಿನಗಳ ಕಾಲಾವಕಾಶ ಕೋರಿತ್ತು.
ಇದರಿಂದ ವಿವಾದ ಮತ್ತಷ್ಟು ಉಲ್ಬಣವಾಯಿತು. ನಿಗದಿತ ಗಡುವಿನಲ್ಲಿ ಶೋಕಾಸ್ ನೋಟಿಸ್ ಗೆ ಉತ್ತರಿಸದೇ ಇದ್ದ ಐಒಎಯನ್ನು ಕೇಂದ್ರ ಕ್ರೀಡಾ ಇಲಾಖೆ ಡಿ. 30ರ ಸಂಜೆ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ಇಷ್ಟೆಲ್ಲಾ ವಿರೋಧಗಳನ್ನು ಎದುರಿಸಿದ ನಂತರ, ಈಗ ಎಚ್ಚೆತ್ತುಕೊಂಡಿರುವ ಐಒಎ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications