2024ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ (ಐಪಿಎಲ್) ಕೆಲವೇ ದಿನಗಳು ಬಾಕಿ ಉಳಿದಿದ್ದು, ಮಾರ್ಚ್ 22ರಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಇದೇ ವೇಳೆ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಅಸಮಾಧಾನ ಇನ್ನು ಶಾಂತವಾಗಿಲ್ಲ. ತಂಡದ ನಾಯಕತ್ವ ಬದಲಾವಣೆಯನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂಬುದು ಸಾಬೀತಾಗಿದೆ.

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಮರಳಿದಾಗಿನಿಂದ ಮತ್ತು ರೋಹಿತ್ ಶರ್ಮಾ ಅವರನ್ನು ಬದಲಾಯಿಸಿ ನಾಯಕನನ್ನಾಗಿ ನೇಮಿಸಿದ ನಂತರ, ಫ್ರಾಂಚೈಸಿ ಅಭಿಮಾನಿಗಳು ಒಗ್ಗಟ್ಟಿನಿಂದ ಪ್ರತಿಭಟಿಸಿದ್ದಾರೆ.
ಇತ್ತೀಚೆಗಷ್ಟೇ ಮುಂಬೈನ ಕಾಲೇಜೊಂದರಲ್ಲಿ ಹಾರ್ದಿಕ್ ಪಾಂಡ್ಯ ಅವರ ಪೋಸ್ಟರ್ ತೆಗೆಯುವಂತೆ ರೋಹಿತ್ ಶರ್ಮಾ ಅಭಿಮಾನಿಗಳು ಆಡಳಿಧಿಕಾರಿಗಳಿಗೆ ಒತ್ತಾಯಿಸಿದರು.
ಐಪಿಎಲ್ 2024ರ ಹರಾಜಿಗೂ ಮೊದಲು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟನ್ಸ್ನಿಂದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ವ್ಯಾಪಾರ ಮಾಡಿಕೊಂಡಿತು ಮತ್ತು ನಂತರ ರೋಹಿತ್ ಶರ್ಮಾ ಅವರ ಬದಲಿಗೆ ಹೊಸ ನಾಯಕರಾಗಿ ಹೆಸರಿಸಲಾಯಿತು.

ಈ ನಿರ್ಧಾರವು ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಏಕೆಂದರೆ ರೋಹಿತ್ ಮುಂಬೈ ತಂಡವನ್ನು ಐದು ಪ್ರಶಸ್ತಿಗಳನ್ನು ಗೆಲ್ಲಲು ಮುನ್ನಡೆಸಿದ್ದಾರೆ ಮತ್ತು ಸದ್ಯ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ.
ಇತ್ತೀಚೆಗೆ ಮುಂಬೈನ ಮುಖೇಶ್ ಪಟೇಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ಆಹ್ವಾನಿಸಲಾಗಿತ್ತು. ಕಾಲೇಜು ಮ್ಯಾನೇಜ್ಮೆಂಟ್ ಬರೋಡಾ ಮೂಲದ ಆಲ್ರೌಂಡರ್ನ ಬೃಹತ್ ಪೋಸ್ಟರ್ ಅನ್ನು ವ್ಯವಸ್ಥೆಗೊಳಿಸಿತ್ತು. ಅಲ್ಲದೆ ಅವರನ್ನು ಮುಂಬೈ ಇಂಡಿಯನ್ಸ್ ನಾಯಕ ಎಂದು ಬಿಂಬಿಸಿತ್ತು.
ಆದರೆ, ಹಾರ್ದಿಕ್ ಪಾಂಡ್ಯ ಅವರನ್ನು ಆಹ್ವಾನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಶರ್ಮಾ ಅಭಿಮಾನಿಗಳಾದ ವಿದ್ಯಾರ್ಥಿಗಳು ಹಾರ್ದಿಕ್ ಪಾಂಡ್ಯ ಪೋಸ್ಟರ್ ತೆಗೆಯುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದರು. ರೋಹಿತ್ ಶರ್ಮಾ ಅಭಿಮಾನಿಗಳು ನಡೆಸುತ್ತಿರುವ ಪ್ರತಿಭಟನೆಗಳ ಸರಣಿಯಲ್ಲಿ ಈ ಆಘಾತಕಾರಿ ಘಟನೆ ಇತ್ತೀಚಿನದಾಗಿದೆ.
ರೋಹಿತ್ ಶರ್ಮಾ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸುವ ಮುಂಬೈ ಇಂಡಿಯನ್ಸ್ ನಿರ್ಧಾರಕ್ಕೆ ಅವರ ಅಭಿಮಾನಿಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಾಯಕನಾಗಿ ಅನುಭವಿ ರೋಹಿತ್ ಶರ್ಮಾ ಅವರನ್ನು ಮರುನೇಮಕ ಮಾಡುವಂತೆ ಒತ್ತಾಯಿಸುವ ಘೋಷಣೆಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ.
ಕಳೆದೆರಡು ಋತುಗಳಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದ ನಂತರ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿದ್ದಾರೆ.
ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ 2022ರಲ್ಲಿ ತಮ್ಮ ಚೊಚ್ಚಲ ಋತುವಿನಲ್ಲಿ ಪ್ರಶಸ್ತಿಯನ್ನು ಗೆದ್ದರೆ, ಕಳೆದ ವರ್ಷ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. 30ರ ಹರೆಯದ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಪಾದದ ಗಾಯದಿಂದ ಬಳಲುತ್ತಿದ್ದರು ಮತ್ತು ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಆದಾಗ್ಯೂ, ಅವರು ಸೋಮವಾರ, ಫೆಬ್ರವರಿ 26ರಂದು ಮುಂಬೈನಲ್ಲಿ ನಡೆದ ಡಿವೈ ಪಾಟೀಲ್ ಟಿ20 ಕಪ್ನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದರು.
ಹಾರ್ದಿಕ್ ಪಾಂಡ್ಯ ಮೂರು ಓವರ್ಗಳಲ್ಲಿ 22 ರನ್ ನೀಡಿ ಎರಡು ವಿಕೆಟ್ ಪಡೆದರು ಮತ್ತು 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಆಡಿದ ನಾಲ್ಕು ಎಸೆತಗಳಲ್ಲಿ 3 ರನ್ ಗಳಿಸಿ ಅಜೇಯರಾಗಿ ಉಳಿದರು. ಹಾರ್ದಿಕ್ ಪಾಂಡ್ಯ ಅವರ ತಂಡವಾದ ರಿಲಯನ್ಸ್ 1, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ವಿರುದ್ಧ ಎರಡು ವಿಕೆಟ್ಗಳಿಂದ ಗೆಲುವು ಸಾಧಿಸಿತು.