
ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತ ಯಶಸ್ವಿನಿ ಸಿಂಗ್ ದೇಶ್ವಾಲ್ ಬಂಗಾರ ಮತ್ತು ಮನು ಭಾರಕರ್ ಬೆಳ್ಳಿ ಪದಕ ಜಯಿಸಿದ್ದಾರೆ. ಇಬ್ಬರೂ ಮಹಿಳಾ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದೇಶಕ್ಕೆ ಪದಕದ ಮೆರಗು ತಂದಿದ್ದಾರೆ.
ಭಾರತಕ್ಕೆ ಬಂಗಾರ ಗೆದ್ದ ಯಶಸ್ವಿನಿ ಸಿಂಗ್ ದೇಶ್ವಾಲ್ ಪದಕ ವಿತರಣೆ ವೇಳೆ (ವಿಜಯ ವೇದಿಕೆ) 'ಭಾರತ್ ಮಾತಾಕೀ ಜೈ' ಎಂದು ಘೋಷಣೆ ಕೂಗುವ ಮೂಲಕ ಸ್ಪರ್ಧಾ ಕೂಟದಲ್ಲಿ ಗಮನ ಸೆಳೆದರು. ದ್ವಿತೀಯ ಸ್ಪರ್ಧಿ ಮುನು ಭಾಕರ್ಗಿಂತ ಯಶಸ್ವಿನಿ ಕೇವಲ 2.1 ಪಾಯಿಂಟ್ಸ್ ಅಂತರದಲ್ಲಿ ಚಿನ್ನ ಗೆದ್ದಿದ್ದು ವಿಶೇಷವಾಗಿತ್ತು.
ಮಹಿಳಾ 10 ಮೀ. ಏರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ಯಶಸ್ವಿನಿ ಒಟ್ಟು 238.8 ಪಾಯಿಂಟ್ಸ್ ಕಲೆ ಹಾಕಿದ್ದರೆ, ಮನು 236.7 ಪಾಯಿಂಟ್ಸ್ನೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು. ಯಶಸ್ವಿನಿ ಮತ್ತು ಮನು ಮಧ್ಯೆ ಒಂದು ಹಂತದಲ್ಲಿ 3.3 ಪಾಯಿಂಟ್ಸ್ ಅಂತರವಿತ್ತಾದರೂ ಕೊನೆಗೂ ಯಶಸ್ವಿನಿ ಮೇಲುಗೈ ಸಾಧಿಸಿದರು.
ಘೋಷಣೆ ಕೂಗಿದ ಬಗ್ಗೆ ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಯಶಸ್ವಿನಿ, 'ರಾಷ್ಟ್ರಗೀತೆಯ ವೇಳೆ ನಾನು ಸಾಮಾನ್ಯವಾಗಿ ಹೀಗೆ ಜೈಕಾರ ಕೂಗುತ್ತೇನೆ. ಸಾಮಾನ್ಯವಾಗಿ ಪ್ರೇಕ್ಷಕರ ಮಧ್ಯೆ ಇರುವ ನನ್ನ ಸ್ನೇಹಿತರು ಹೀಗೆ ಜೈಕಾರ ಕೂಗುತ್ತಾರೆ, ಆದರೆ ಇವತ್ತು ಅವರಿಲ್ಲದ್ದರಿಂದ ನಾನೇ ಕೂಗಿದೆ,' ಎಂದು ಪ್ರತಿಕ್ರಿಯಿಸಿದರು.