ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಮುಂಬರುವ ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಬೆದರಿಕೆ ಸಂದೇಶವನ್ನು ನೀಡಿದ್ದಾನೆ ಎಂದು ವರದಿಯಾಗಿದೆ.
ನಿರ್ದಿಷ್ಟವಾಗಿ, ಅಕ್ಟೋಬರ್ 5ರಂದು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯವನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಉಗ್ರ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥನ ಈ ಬೆದರಿಕೆಗಳು ಗಂಭೀರ ಆತಂಕವನ್ನು ಹುಟ್ಟುಹಾಕಿದೆ. ಆತಂಕಕಾರಿ ಸಂದೇಶವನ್ನು ಕಳುಹಿಸಿರುವ ಆರೋಪಿತ ಆಡಿಯೋ ಎಕ್ಸ್ (ಟ್ವಿಟ್ಟರ್) ನಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಭಾರತದ ಹಲವಾರು ವ್ಯಕ್ತಿಗಳು ಯುಕೆ ಫೋನ್ ಸಂಖ್ಯೆ +44 7418 343648 ನಿಂದ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕಳುಹಿಸುವ ಮೊದಲೇ ರೆಕಾರ್ಡ್ ಮಾಡಿದ ಆಡಿಯೋ ಸಂದೇಶ ವೈರಲ್ ಆಗಿದೆ.
ಈ ಆತಂಕಕಾರಿ ಆಡಿಯೋ ಸಂದೇಶದಲ್ಲಿ, ಖಲಿಸ್ತಾನಿ ಉಗ್ರ ಹಾಗೂ ಸಿಖ್ ಫಾರ್ ಜಸ್ಟೀಸ್ ಜನರಲ್ ಕೌನ್ಸಿಲ್ನ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ನೀಡಿದ್ದು, "ಶಾಹೀದ್ ನಿಜ್ಜರ್ ಹತ್ಯೆಯ ಪ್ರತೀಕಾರವಾಗಿ, ನಾವು ನಿಮ್ಮ ಬುಲೆಟ್ ಮತ್ತು ನಿಮ್ಮ ಹಿಂಸೆಯ ವಿರುದ್ಧ ನಾವು ಮತವನ್ನು ಬಳಸಲಿದ್ದೇವೆ. ನೆನಪಿಡಿ, ಅಕ್ಟೋಬರ್ 5, ಇದು ವಿಶ್ವ ಕ್ರಿಕೆಟ್ ಕಪ್ ಆಗುವುದಿಲ್ಲ. ಇದು ವಿಶ್ವ ಭಯೋತ್ಪಾದಕ ಕಪ್ನ ಆರಂಭವಾಗಲಿದೆ," ಎಂಬ ಸಂದೇಶ ಬಂದಿದೆ.
ಆಡಿಯೋ ರೆಕಾರ್ಡಿಂಗ್ನಲ್ಲಿ, ಗುರುಪತ್ವಂತ್ ಸಿಂಗ್ ಪನ್ನುನ್ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ, ವಿಶೇಷವಾಗಿ ಕೆನಡಾದ ಭಾರತದ ಹೈ-ಕಮಿಷನರ್ ಸಂಜಯ್ ವರ್ಮಾಗೆ ಬೆದರಿಕೆ ಹಾಕಿದ್ದಾನೆ.
"ಭಾರತ ಮತ್ತು ನರೇಂದ್ರ ಮೋದಿ ಆಡಳಿತವು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಅವಮಾನಿಸಿದೆ. ಮೋದಿ ಆಡಳಿತ, ಒಟ್ಟಾವಾದಲ್ಲಿರುವ ನಿಮ್ಮ ರಾಯಭಾರ ಕಚೇರಿಯನ್ನು ಮುಚ್ಚುವುದು ಮತ್ತು ನಿಮ್ಮ ರಾಯಭಾರಿಯನ್ನು ಮರಳಿ ಕರೆಸುವುದು ಸೂಕ್ತ," ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ತನ್ನ ಸಂದೇಶದಲ್ಲಿ ಹೇಳಿದ್ದಾನೆ.
ಪತ್ರಕರ್ತ ಆದಿತ್ಯ ರಾಜ್ ಕೌಲ್ ಪೂರ್ವ-ದಾಖಲಿತ ಕರೆಯನ್ನು ಸ್ವೀಕರಿಸಿದವರಲ್ಲಿ ಒಬ್ಬರಾಗಿದ್ದಾರೆ. ಐಪಿ-ಕರೆ ಮಾಡುವ ಸೌಲಭ್ಯದ ಮೂಲಕ ಬೆರದಿಕೆ ಸಂದೇಶ ನೀಡಲಾಗಿದೆ ಎಂದು ಶಂಕಿಸಲಾಗಿದೆ. ಇದು ಭಾರತದಲ್ಲಿ ಖಲಿಸ್ತಾನಿ ಚಟುವಟಿಕೆಗಳನ್ನು ಹೆಚ್ಚಿಸುವ ಬಗ್ಗೆ ಎಚ್ಚರಿಕೆಯ ಗಂಟೆ ಎನ್ನಬಹುದು.
ಈ ಬೆಳವಣಿಗೆಗಳು ಕೆನಡಾದ ಸರ್ರೆಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಯ ನಂತರ, ಕೆನಡಾದ ಸರ್ಕಾರದಿಂದ ಬೆಂಬಲಿತವಾದ ಖಲಿಸ್ತಾನಿ ಗುಂಪುಗಳಿಂದ ಭಾರತದ ವಿರುದ್ಧ ಹೆಚ್ಚಿದ ಆರೋಪಗಳಿಗೆ ಹೊಂದಿಕೆಯಾಗಿದೆ.
ಈ ಆಪಾದಿತ ಬೆದರಿಕೆಗಳು ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದೊಡ್ಡ ಸಮಸ್ಯೆಯಾಗಿದ್ದು, ಭದ್ರತಾ ಆತಂಕಗಳು ಹೆಚ್ಚಾಗುವ ನಿರೀಕ್ಷೆ ಇದೆ.
ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಅನುಮಾನವನ್ನು ಖಲಿಸ್ತಾನಿ ಗುಂಪುಗಳು ಭಾರತದತ್ತ ಬೆರಳು ತೋರಿಸುತ್ತಿವೆ ಮತ್ತು ಇದಕ್ಕೆ ಕೆನಡಾದ ಸರ್ಕಾರದಿಂದ ಬೆಂಬಲ ಪಡೆದುಕೊಂಡಿವೆ.
ಇದು ಎರಡು ದೇಶಗಳ ನಡುವೆ ಅಶಾಂತ ವಾತಾವರಣವನ್ನು ಉಂಟುಮಾಡಿದೆ. ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್ನಲ್ಲಿ ಭಾರತೀಯ ಮಿಷನ್ ಮುಖ್ಯಸ್ಥರ ಹತ್ಯೆಗೆ ಬಹಿರಂಗವಾಗಿ ಕರೆ ನೀಡುವ ಪೋಸ್ಟರ್ಗಳು ಕೆನಡಾದಲ್ಲಿ ರಾರಾಜಿಸುತ್ತಿವೆ.
ಇತ್ತೀಚೆಗೆ, ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರ ಮುಂಭಾಗದಲ್ಲಿ ಇಂತಹ ಪ್ರಚೋದನಕಾರಿ ಪೋಸ್ಟರ್ಗಳನ್ನು ತೆಗೆದುಹಾಕಲಾಗಿದೆ.
ಸೆಪ್ಟೆಂಬರ್ 23ರಂದು ಚಂಡೀಗಢದ ಸೆಕ್ಟರ್ 15ಸಿ ನಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ.
ವರದಿಗಳ ಪ್ರಕಾರ, ಎನ್ಐಎ ಗುರುಪತ್ವಂತ್ ಸಿಂಗ್ ಪನ್ನುನ್ ಕುರಿತು ಹೊಸ ದಾಖಲೆಗಳನ್ನು ಸಂಗ್ರಹಿಸಿದೆ. ಅದನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದು. ಖಲಿಸ್ತಾನವನ್ನು ರಚಿಸುವ ಮತ್ತು ಭಾರತ ದೇಶವನ್ನು ಬಹು ಭಾಗಗಳಾಗಿ ವಿಭಜಿಸುವ ಪನ್ನುನ್ನ ಮಹತ್ವಾಕಾಂಕ್ಷೆಗಳನ್ನು ದಾಖಲೆಗಳು ಬಹಿರಂಗಪಡಿಸುತ್ತದೆ.
ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎಂದು ಎನ್ಐಎ ದಾಖಲೆ ಹೇಳಿದೆ.
ಫೆಬ್ರವರಿ 1967ರಲ್ಲಿ ಜನಿಸಿದ ಗುರುಪತ್ವಂತ್ ಸಿಂಗ್ ಪನ್ನುನ್, 1947ರಲ್ಲಿ ಖಾನ್ಕೋಟ್ ಗ್ರಾಮದಲ್ಲಿ ಪಾಕಿಸ್ತಾನದಿಂದ ಪಂಜಾಬ್ನ ಅಮೃತಸರಕ್ಕೆ ವಲಸೆ ಬಂದ ಕುಟುಂಬದವನಾಗಿದ್ದಾನೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ವಕೀಲರಾಗಿರುವ ಪನ್ನುನ್ ತಮ್ಮದೇ ಆದ ಸಂಸ್ಥೆಯನ್ನು ನಿರ್ವಹಿಸುತ್ತಾನೆ. ಅವರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್, ಖಲಿಸ್ತಾನ್ ಸ್ಥಾಪಿಸುವ ಗುರಿಯನ್ನು ಹೊಂದಿರುವ ಪಂಜಾಬ್ ಅನ್ನು ಭಾರತದಿಂದ ಪ್ರತ್ಯೇಕಿಸಲು ಪ್ರತಿಪಾದಿಸುವ ಪ್ರತ್ಯೇಕತಾವಾದಿ ಗುಂಪಾಗಿದೆ.
ಜುಲೈ 2020ರಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ.