ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ, ಸೆಪ್ಟೆಂಬರ್ 4ರಂದು ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಮತ್ತು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ದಂಪತಿ ಗಂಡು ಮೊದಲ ಮಗುವನ್ನು ಸ್ವಾಗತಿಸಿದರು.
ಜಸ್ಪ್ರೀತ್ ಬುಮ್ರಾ ಅವರು 2023ರ ಏಷ್ಯಾ ಕಪ್ ನಡೆಯುತ್ತಿರುವ ಶ್ರೀಲಂಕಾದಿಂದ ಭಾನುವಾರವೇ ತವರಿಗೆ ಹಿಂತಿರುಗಿ ಈ ಸುಂದರ ಘಳಿಗೆಯಲ್ಲಿ ತಮ್ಮ ಕುಟುಂಬದ ಜೊತೆಗೆ ಹಾಜರಾಗಿದ್ದರು. ಸೋಮವಾರ ಬೆಳಿಗ್ಗೆ ತಮ್ಮ ಮಗುವಿನ ಜನನದ ಸಂದೇಶವನ್ನು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ.

"ನಮ್ಮ ಪುಟ್ಟ ಕುಟುಂಬವು ಬೆಳೆದಿದೆ ಮತ್ತು ನಮ್ಮ ಹೃದಯಗಳು ನಾವು ಊಹಿಸಿರುವುದಕ್ಕಿಂತ ತುಂಬಿವೆ! ಇಂದು (ಸೋಮವಾರ) ಬೆಳಿಗ್ಗೆ ನಾವು ನಮ್ಮ ಪುಟ್ಟ ಗಂಡುಮಗು 'ಅಂಗದ್ ಜಸ್ಪ್ರೀತ್ ಬುಮ್ರಾ' ಅವರನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ. ನಾವು ಚಂದ್ರನ ಮೇಲೆ ತೇಲುತ್ತಿದ್ದೇವೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯವು ಅವನೊಂದಿಗೆ ಕಳೆಯುವುದನ್ನು ಕಾಯಲು ಸಾಧ್ಯವಿಲ್ಲ. ಜಸ್ಪ್ರಿತ್ ಮತ್ತು ಸಂಜನಾ," ಎಂದು ಕ್ರಿಕೆಟಿಗ ಜಸ್ಪ್ರಿತ್ ಬುಮ್ರಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಏಷ್ಯಾ ಕಪ್ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಎರಡನೇ ಇನ್ನಿಂಗ್ಸ್ ಸಂಪೂರ್ಣ ಮಳೆಯಿಂದಾಗಿ ಕೊಚ್ಚಿ ಹೋಯಿತು. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ಮುಕ್ತಾಯಗೊಂಡ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಸುಮಾರು 11 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅತ್ಯುತ್ತಮ ಪುನರಾಗಮನ ಮಾಡಿದ್ದರು. ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದ ನಂತರ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದಿದ್ದರು.
ಇನ್ನು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಸೂಪರ್ 4ಕ್ಕೆ ಅರ್ಹತೆ ಪಡೆದರೆ ಜಸ್ಪ್ರೀತ್ ಬುಮ್ರಾ ಶ್ರೀಲಂಕಾಕ್ಕೆ ಹಿಂತಿರುಗುವ ನಿರೀಕ್ಷೆಯಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಜೊತೆಗಾರನಾಗಿರುವ ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಮರಳಿ ಕರೆತರಲು ಭಾರತ ತಂಡ ನಿರ್ಧರಿಸಲಬಹುದು.
ಆದರೆ, ತಂಡದ ಮ್ಯಾನೇಜ್ಮೆಂಟ್ ವೇಗಿ ಪ್ರಸಿದ್ಧ್ ಕೃಷ್ಣ ಅವರ ಫಿಟ್ನೆಸ್ ಅನ್ನು ಪರೀಕ್ಷಿಸಲು ಎದುರು ನೋಡಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೊಹಮ್ಮದ್ ಶಮಿ ಬದಲಿ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದರು.
ಪ್ರಸಿದ್ಧ್ ಕೃಷ್ಣ ಅವರು ಜಸ್ಪ್ರೀತ್ ಬುಮ್ರಾ ಜೊತೆಗೆ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಿದರು.