ಬೆಂಗಳೂರು, ಆಗಸ್ಟ್ 23: ರಿಯೋ ಒಲಿಂಪಿಕ್ಸ್ ಸ್ಪರ್ಧಿಯಾಗಿದ್ದ ಸುಧಾಸಿಂಗ್ ಅವರು ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಾರೋಗ್ಯಕ್ಕೆ ಒಳಗಾಗಿ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಥ್ಲೀಟ್ ಸುಧಾಸಿಂಗ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಸುಧಾಸಿಂಗ್ ಅವರ ಚಿಕಿತ್ಸೆ ಬಗ್ಗೆ ಗಮನ ಹರಿಸುವಂತೆ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಸೂಚಿಸಿದ್ದಾರೆ. ಸುಧಾಸಿಂಗ್ ಅವರು ಶೀಘ್ರ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ.
ಎಲ್ಲಾ ಅಥ್ಲೀಟ್ ಗಳಿಗೂ ಪರೀಕ್ಷೆ: ಕರ್ನಾಟಕದ ಆರೋಗ್ಯ ಇಲಾಖೆ ಅಧಿಕಾರಿಗಳು ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಬ್ರೆಜಿಲ್ಲಿನ ರಿಯೋದಿಂದ ಬೆಂಗಳೂರಿಗೆ ಮರಳಿರುವ ಕ್ರೀಡಾಪಟುಗಳಿಗೆ ಝೀಕಾ ವೈರಾಣು ತಗುಲಿದೆಯೇ? ಎಂಬುದರ ಬಗ್ಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಮುಖ್ಯಸ್ಥರಾದ ಡಾ ಲೋಕೇಶ್ ಎಂಎನ್ ಮಾತನಾಡಿ, ಸುಧಾ ಅವರ ರಕ್ತದ ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದ್ದು, ಝೀಕಾ ವೈರಸ್ ಸೋಂಕು ತಗುಲಿರುವ ಬಗ್ಗೆ ಖಾತ್ರಿ ಪಡೆಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಸಂದೇಶದಂತೆ ಸುಧಾ ಅವರ ಜತೆಗಿದ್ದ ಇತರೆ ಅಥ್ಲೀಟ್ ಗಳಾದ ಓಪಿ ಜೈಶಾ, ಕವಿತಾ ರೌತ್ ಹಾಗೂ ಲಲಿತಾ ಬಾಬರ್ ಅವರಿಗೂ ಪರೀಕ್ಷೆಗೊಳಪಡುವಂತೆ ಸೂಚಿಸಲಾಗಿದೆ ಎಂದು ಡಾ. ಲೋಕೇಶ್ ಹೇಳಿದರು.