
ಮಂಗಳೂರು, ಫೆಬ್ರವರಿ 15: ಮಂಗಳೂರಿನ ಮಿಜಾರ್ ನಿವಾಸಿ ಶ್ರೀನಿವಾಸ್ ಗೌಡ ಅವರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ದಾಖಲೆಯ ಓಟ ಓಡಿದ ಶ್ರೀನಿವಾಸ್, ಭಾರತದ ಕೇಂದ್ರ ಕ್ರೀಡಾ ಸಚಿವರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ. ಕಂಬಳ ಕ್ರೀಡೆಯತ್ತವೂ ಭಾರತದ ಕ್ರೀಡಾಭಿಮಾನಿಮಾನಿಗಳು ಇಣುಕಿ ನೋಡುತ್ತಿದ್ದಾರೆ.
ಟ್ವಿಟ್ಟರಲ್ಲೂ ಕಂಬಳದ ಓಟಗಾರನದ್ದೇ ಸದ್ದು, ಮಹೀಂದ್ರಾ ಮೆಚ್ಚುಗೆ
28ರ ಹರೆಯದ ಶ್ರೀನಿವಾಸ್ ಗೌಡ, ಐಕಳದಲ್ಲಿ ನಡೆದ ನೇಗಿಲು ಹಿರಿಯ ಕಂಬಳದಲ್ಲಿ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್ಗಳಲ್ಲಿ ಮುಗಿಸಿದ್ದರು. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ 100 ಮೀಟರ್ ದೂರವನ್ನು 9.58 ಸೆಕೆಂಡ್ಗಳಲ್ಲಿ ಓಡಿದ್ದರು. ಹೀಗಾಗಿ ಶ್ರೀನಿವಾಸ್, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ದರು.
ಸಾಮಾಜಿಕ ಜಾಲತಾಣದಲ್ಲಿ 'ಉಸೇನ್ ಬೋಲ್ಟ್ ದಾಖಲೆ ಮೀರಿಸಿದ ಕಂಬಳ ವೀರ ಶ್ರೀನಿವಾಸ ಗೌಡ,' ಎಂಬಿತ್ಯಾದಿ ಸುದ್ದಿಗಳು ಹರಿದಾಡತೊಡಗಿದಾಗ ಕಂಬಳ ಮತ್ತು ಶ್ರೀನಿವಾಸ ಗೌಡ ಅವರತ್ತ ರಾಷ್ಟ್ರೀಯ ಕ್ರೀಡಾ ಸಚಿವಾಲವೇ ತಿರುಗಿ ನೋಡಿದೆ. ಕ್ರೀಡಾ ಸಚಿವ ಕಿರಣ್ ರಿಜಿಜು, ಶ್ರೀನಿವಾಸ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ (ಸಾಯ್) ಉನ್ನತ ಕೋಚ್ಗಳಿಂದ ಕರ್ನಾಟಕದ ಶ್ರೀನಿವಾಸ್ ಗೌಡಗೆ ಟ್ರಯಲ್ಸ್ ನಡೆಸಲು ನಾನು ಕರೆ ನೀಡುತ್ತಿದ್ದೇನೆ. ಒಲಿಂಪಿಕ್ಸ್ನ ಮಾನದಂಡಗಳ ಬಗ್ಗೆ ಮುಖ್ಯವಾಗಿ ಅಥ್ಲೆಟಿಕ್ಸ್ನಲ್ಲಿ ಮಾನವ ಶಕ್ತಿ ಮತ್ತು ಸಹಿಷ್ಣುತೆಯನ್ನು ಮೀರಿಸುವ ಬಗೆಗಿನ ವಿಚಾರದ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ಭಾರತದ ಯಾವುದೇ ಪ್ರತಿಭೆ ಪರೀಕ್ಷೆಯಾಗದೆ ಉಳಿಯಬಾರದು ಅನ್ನೋದಂತೂ ಭರವಸೆ ನೀಡುತ್ತಿದ್ದೇನೆ,' ಎಂದು ಟ್ವೀಟ್ ಮಾಡಿದ್ದಾರೆ.
ಗೌಡ ಅವರು 142.50 ಮೀಟರ್ ಓಟವನ್ನು 13.62 ಮುಗಿಸಿದ್ದಾರೆ. ಇದೇ ಕಾಲಾವಧಿಯನ್ನು 100 ಮೀ. ಓಟಕ್ಕೆ ಹೋಲಿಸಿ ಲೆಕ್ಕಾಚಾರ ಹಾಕಿದರೆ ಶ್ರೀನಿವಾಸ್, 9.55 ಸೆಕೆಂಡ್ಗಳಲ್ಲಿ 100 ಮೀ. ಓಟ ಮುಗಿಸಿದಂತಾಗುತ್ತದೆ. ಅಂದರೆ ಇದು ಬೋಲ್ಟ್ಗಿಂತ 3 ಸೆಕೆಂಡ್ ಉತ್ತಮ ಸಾಧನೆಯಾಗುತ್ತದೆ. ಶ್ರೀನಿವಾಸ್ ಸುದ್ದಿಯಾಗಿದ್ದು ಇದೇ ಕಾರಣಕ್ಕೆ. ಅಂದ್ಹಾಗೆ, ಶ್ರೀನಿವಾಸ್ ಪ್ರತಿಭೆಯನ್ನು ಪರೀಕ್ಷಿಸಲು ಕರೆ ನೀಡಿರುವ ಕ್ರೀಡಾ ಸಚಿವರು, ಗೌಡಗೆ ಟ್ರಯಲ್ ಟಿಕೆಟ್ ಕೂಡ ರೆಡಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.