ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2 ಪದಕಗಳನ್ನು ಗೆದ್ದು ಭಾರೀ ಸದ್ದು ಮಾಡಿದ್ದರು. ಆದರೆ ಇದೀಗ ಮನು ಭಾಕರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನದಿಂದ ಹೊರಗುಳಿದಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ 23 ರಂದು ಖೇಲ್ ರತ್ನ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಮನು ಭಾಕರ್ ಅವರ ಹೆಸರಿಲ್ಲ.
ಮನು ಅವರು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ನಾಮನಿರ್ದೇಶನದಿಂದ ಹೊರಗುಳಿದಿರುವ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದಾದ ನಂತರ ಮನು ಅರ್ಜಿ ಸಲ್ಲಿಸಿದ್ದರೂ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರ ತಂದೆ ಗಂಭೀರವಾಗಿ ಆರೋಪಿಸಿದ್ದಾರೆ. ಇದೀಗ ಖೇಲ್ ರತ್ನ ಪ್ರಶಸ್ತಿಯ ನಾಮನಿರ್ದೇಶನದಿಂದ ಹೊರಗುಳಿದಿರುವ ಬಗ್ಗೆ ಮನು ಭಾಕರ್ ತುಟಿ ಬಿಚ್ಚಿದ್ದಾರೆ.

ಮನು ಭಾಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿವ ಮೂಲಕ ಖೇಲ್ ರತ್ನ ಪ್ರಶಸ್ತಿಯ ನಾಮನಿರ್ದೇಶನದಿಂದ ಹೊರಗುಳಿದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ನನ್ನ ಮೊದಲ ಗುರಿ ದೇಶಕ್ಕಾಗಿ ಪದಕ ಗೆಲ್ಲುವುದು. ಯಾವುದೇ ಪ್ರಶಸ್ತಿ ಪಡೆಯಲು ಅಲ್ಲ. ಕ್ರೀಡಾಪಟುಗಳಿಗೆ ಪ್ರಶಸ್ತಿಗಳು ಪ್ರೇರಣೆ ನೀಡುತ್ತವೆ. ಆದರೆ ಅದು ಅವರ ಅಂತಿಮ ಗುರಿಯಲ್ಲ' ಎಂದು ಎಂದು ಹೇಳಿದ್ದಾರೆ. ಇದೇ ವೇಳೆ ಖೇಲ್ ರತ್ನ ಪ್ರಶಸ್ತಿಯ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ತಮ್ಮಿಂದ ಆಗಿರುವ ಲೋಪವನ್ನು ಒಪ್ಪಿಕೊಂಡಿದ್ದು, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವ ಕುರಿತು ಮನು ಭರವಸೆ ನೀಡಿದ್ದಾರೆ.
ಭಾರತದ ಸ್ಟಾರ್ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸಿದಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಾದ ನಂತರ, ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಟೀಮ್ ಈವೆಂಟ್ನಲ್ಲಿ ತಮ್ಮ ಪಾಲುದಾರ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ ಎರಡನೇ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಮನು ಭಾಕರ್ ಅವರು ಭಾರತದ ಸ್ವಾತಂತ್ರ್ಯದ ನಂತರ ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು.
ಸದ್ಯ ನಾಮನಿರ್ದೇಶನಕ್ಕೆ ಹೆಸರು ಸಲ್ಲಿಸಿದ ಆಟಗಾರರ ಅಂತಿಮ ಪಟ್ಟಿ ಪ್ರಕಟವಾಗಿಲ್ಲ. ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಶಿಫಾರಸುಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧರಿಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಪಟ್ಟಿಯಲ್ಲಿ ಮನು ಭಾಕರ್ ಹೆಸರು ಬರುವ ಎಲ್ಲಾ ಸಾಧ್ಯತೆಗಳಿವೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಹೇಳಿವೆ.