ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದ ಅಥ್ಲೀಟ್ಗಳು ಹಾಗೂ ಕ್ರೀಡಾ ಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಈ ಪ್ರಶಸ್ತಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಮೋಘ ಸಾಧನೆ ಮಾಡಿದ ಮನು ಭಾಕರ್ ಅವರಿಗೆ ಖೆಲ್ ರತ್ನ ಪ್ರಶಸ್ತಿ ಸಿಗಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಅಭಿಮಾನಿಗಳ ಆಸೆಗೆ ಪೆಟ್ಟು ಬಿದ್ದಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. ಅಲ್ಲದೆ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾ ಪಟು ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಮನು ಭಾಕರ್ ಅವರ ಹೆಸರು ಖೇಲ್ ರತ್ನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್ಆರ್ಎಐ) ಅಥವಾ ಮನು ಭಾಕರ್ ಸ್ವತಃ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ ಮನು ಭಾಕರ್ ಅವರ ಕುಟುಂಬ ಪದ್ಮಶ್ರೀ ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಿದೆ. ಈ ಪ್ರಶಸ್ತಿ ಭಾರತದ ನಾಲ್ಕನೇ ಮಹೋನ್ನತ ಪ್ರಶಸ್ತಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮನು ಭಾಕರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಬಯಸಿದ್ದರೆ, ಆ ಪ್ರಶಸ್ತಿಯ ಪ್ರಕ್ರಿಯೆಗಳು ಬೇರೆ ರೀತಿಯಾಗಿವೆ. ಈ ಬಗ್ಗೆ ಅವರ ಪೋಷಕರಿಗೆ ತಿಳಿಸಿ ಹೇಳಬೇಕಿದೆ ಎಂದು ವರದಿ ಮಾಡಿದೆ. ಇನ್ನು ಮನು ಖೆಲ್ ರತ್ನ ಪ್ರಶಸ್ತಿಗೆ ಅರ್ಜಿ ಹಾಕುವುದನ್ನು ಮರೆತಿದ್ದರೆ ಎನ್ಆರ್ಎಐ, ಶೂಟರ್ ಪರವಾಗಿ ಅರ್ಜಿ ಸಲ್ಲಿಬೇಕು.
ಇನ್ನು ಖೇಲ್ ರತ್ನ ಪಟ್ಟಿಯಲ್ಲಿ ಮನು ಭಾಕರ್ ಹೆಸರು ಇಲ್ಲದೇ ಇರುವುದನ್ನು ಕಂಡು ಇದಕ್ಕೆ ಎನ್ಆರ್ಎಐ ಅಧ್ಯಕ್ಷ ಕಾಲಿಕೇಶ್ ನಾರಾಯಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶಸ್ತಿಗೆ ಅರ್ಜಿ ಸಲ್ಲಿಸುವುದು ಕ್ರೀಡಾಪಟುವಿನ ಜವಾಬ್ದಾರಿ. ಆದರೆ, ಪಟ್ಟಿಯಲ್ಲಿ ಅವರ ಹೆಸರು ಇಲ್ಲವೆಂದು ತಿಳಿದು ನಾವು, ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿದ್ದೇವೆ. ಅಲ್ಲದೆ ಮನು ಹೆಸರನ್ನು ಸೇರಿಸುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ಕ್ರೀಡಾ ಕ್ಷೇತ್ರದಲ್ಲಿ ನೀಡುವ ಉನ್ನತ ಪ್ರಶಸ್ತಿಗಾಗಿ ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಹಾಗೂ ಪ್ಯಾರಾ ಹೈಜಂಪ್ ಅಥ್ಲೀಟ್ ಪ್ರವೀಣ್ ಕುಮಾರ್ ಹೆಸರುನ್ನು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭಾರತದ ಖ್ಯಾತ ಶೂಟರ್ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮನು ಭಾಕರ್ ಅಂತಾರಾಷ್ಟ್ರೀಯ ಶೂಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಯುಥ್ ಒಲಿಂಪಿಕ್ಸ್ನಲ್ಲಿ ಬಂಗಾರದ ಸಾಧನೆ ಮಾಡಿದ್ದ ಮನು, ಟೋಕಿಯೋದಲ್ಲಿ ಪದಕ ವಂಚಿತರಾಗಿದ್ದರು. ಆದರೆ ಪ್ಯಾರಿಸ್ನಲ್ಲಿ ಎರಡು ಕಂಚಿನ ಪದಕ ಗೆದ್ದು ಬೀಗಿದ್ದಾರೆ.