ನಮ್ಮೂರ ಪ್ರತಿಭೆ: ರೆಸ್ಲಿಂಗ್ ಕನಸು ಬದಿಗಿಟ್ಟು ವೈಟ್ಲಿಫ್ಟರ್ ಆದ ಕಥೆ: ಮತ್ತೊಂದು ಕಾಮನ್ವೆಲ್ತ್ ಪದಕದ ಮೇಲೆ ಗುರುರಾಜ್ ಕಣ್ಣು

2018ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪರವಾಗಿ ಪದಕ ಗೆದ್ದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಗುರುರಾಜ್ ಪೂಜಾರಿ. ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಗುರುರಾಜ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಮ್ಮೆ ಪಡುವಂತೆ ಮಾಡಿದ್ದಾರೆ. ತಾವು ಸ್ಪರ್ಧಿಸಿದ್ದ ಮೊದಲ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಗುರುರಾಜ್ ಈಗ ಮತ್ತೊಂದು ಕಾಮನ್ವೆಲ್ತ್ ಗೇಮ್ಸ್ಗೆ ಸಜ್ಜಾಗುತ್ತಿದ್ದಾರೆ.
ಬಾಲ್ಯದಿಂದಲೇ ಕ್ರೀಡಾಕ್ಷೇತ್ರದ ಮೇಲೆ ಹೆಚ್ಚಿನ ಒಲವು ಹೊಂದಿದ್ದ ಗುರುರಾಜ್ ವೈಟ್ಲಿಫ್ಟರ್ ಆಗಿದ್ದು ಮಾತ್ರ ಅಚಾನಕ್ ಆಗಿ. ಆದರೆ ತಮ್ಮ ಛಲದಿಂದ ಗುರುರಾಜ್ ವೈಟ್ ಲಿಫ್ಟರ್ ಆಗಿಯೂ ಯಶಸ್ಸು ಸಾಧಿಸುತ್ತಾ ಸಾಗಿದರು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಅವರು ಮತ್ತಷ್ಟು ಸಾಧನೆಯ ಮೇಲೆ ಕಣ್ಣಿಟ್ಟಿದ್ದಾರೆ. ಕರ್ನಾಟಕದ ಈ ಹೆಮ್ಮೆಯ ಕ್ರೀಡಾಪಟುವಿನ ಸಾಧನೆಯ ಹಾದಿ ಹೇಗಿತ್ತು? ಅವರ ಭವಿಷ್ಯದ ಯೋಜನೆಗಳೇನು? ಈ ಬಗ್ಗೆ ಸ್ವತಃ ಗುರುರಾಜ್ ಪೂಜಾರಿ ಮೈಖೇಲ್ ಕನ್ನಡದ ಜೊತೆಗೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಕಬಡ್ಡಿ, ರೆಸ್ಲಿಂಗ್ ಮೇಲೆ ಆಸಕ್ತಿ, ವೈಟ್ಲಿಫ್ಟರ್ ಆಗಿದ್ದೇ ಕುತೂಹಲ
ಬಡ ಕುಟುಂಬದಲ್ಲಿ ಹುಟ್ಟಿದ ಗುರುರಾಜ್ ಕುಂದಾಪುರ ವಡ್ಸೆ ಗ್ರಾಮದ ಮಹಾಬಲ ಪೂಜಾರಿ-ಪದ್ದು ಪೂಜಾರಿ ದಂಪತಿ ಪುತ್ರ. ಗುರುರಾಜ್ಗೆ ಬಾಲ್ಯದಿಂದಲೇ ಕ್ರೀಡೆ ಆಕರ್ಷಿಸಿತ್ತು. ಅದರಲ್ಲೂ ಕಬಡ್ಡಿ ಹಾಗೂ ರೆಸ್ಲಿಂಗ್ ಮೇಲೆ ಹೆಚ್ಚಾಗಿ ಆಸಕ್ತಿ ಬೆಳೆಸಿಕೊಂಡಿದ್ದರು ಗುರುರಾಜ್. ಪದವಿ ಪೂರ್ವ ಕಾಲೇಜು ಹಂತದಲ್ಲಿ ರೆಸ್ಲಿಂಗ್ನಲ್ಲಿ ರಾಜ್ಯಮಟ್ಟದವರೆಗೂ ಸ್ಪರ್ಧಿಸಿದ್ದರು. ಕೊಕ್ಕೋ ಕ್ರೀಡೆಯಲ್ಲಿ ಕೂಡ ಗುರುರಾಜ್ ಗಮನಸೆಳೆದಿದ್ದರು. ಮನೆಯಲ್ಲಿ ಕ್ರೀಡೆ ಬಿಟ್ಟು ವಿದ್ಯಾಭ್ಯಾಸದತ್ತ ಗಮನ ನೀಡಲು ಒತ್ತಡವಿದ್ದರೂ ಅವರನ್ನು ಒಪ್ಪಿಸಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವ ಛಲ ತೋರಿಸಿದ್ದರು. ಹೀಗೆ ಗುರುರಾಜ್ ಆಯ್ಕೆ ಮಾಡಿಕೊಂಡಿದ್ದು ಉಜಿರೆ ಎಸ್ಡಿಎಂ ಕಾಲೇಜ್ಅನ್ನು. ಉಜಿರೆ ಕಾಲೇಜಿಗೆ ಸೇರಿಕೊಂಡ ಬಳಿಕ ಗುರುರಾಜ್ ಕ್ರೀಡಾ ಸಾಧನೆಗೆ ಹೊಸ ಭರವಸೆ ದೊರೆಯಿತು.

ರೆಸ್ಲಿಂಗ್ ಕನಸು ಬದಿಗಿಟ್ಟ ಗುರು
ಕ್ರೀಡೆಯಲ್ಲಿ ಮಾಡಿದ ಸಾಧನೆಯ ಕಾರಣದಿಂದಾಗಿ ಗುರುರಾಜ್ಗೆ ಕ್ರೀಡಾಕೋಟಾದಲ್ಲಿ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆಯಿತು. ಆದರೆ ತನ್ನ ನೆಚ್ಚಿನ ರೆಸ್ಲಿಂಗ್ ವಿಭಾಗದಲ್ಲಿ ಗುರುರಾಜ್ಗೆ ಅವಕಾಶ ದೊರೆಯಲಿಲ್ಲ. ಉಜಿರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ದೂರದ ಓಟಕ್ಕಾಗಿ (Long Distance Race) ಗುರು ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಬಳಿಕ ಕ್ರೀಡಾಭ್ಯಾಸದ ವೇಳೆ ಅಲ್ಲಿನ ಲಿಫ್ಟಿಂಗ್ ಕೋಚ್ ನ ಕಣ್ಣಿಗೆ ಬಿದ್ದು ಲಿಫ್ಟಿಂಗ್ ನತ್ತ ವಾಲಿದ್ದೇ ಒಂದು ಟರ್ನಿಂಗ್ ಪಾಯಿಂಟ್. ಎಸ್ಡಿಎಂ ಕಾಲೇಜಿನಲ್ಲಿ ದೊರೆತ ಪ್ರೋತ್ಸಾಹ ಹಾಗೂ ಗುಣಮಟ್ಟದ ಅಭ್ಯಾಸದಿಂದಾಗಿ ಗುರುರಾಜ್ ಆತ್ಮವಿಶ್ವಾಸ ಹೆಚ್ಚಾಯಿತು. ನಂತರ ಹಿಂದಿರುಗಿ ನೋಡಿಲೇಇಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುರಾಜ್ ಸಾಧನೆ
ಕಾಲೇಜುಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಲು ಆರಂಭಿಸಿದ ಗುರುರಾಜ್ಗೆ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಲು ಆರಂಭಿಸಿದರು. 2016ರಲ್ಲಿ ಗುವಾಹಟಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೊದಲ ದಿನವೇ 56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗುರುರಾಜ್ ಚಿನ್ನಗೆದ್ದಿದ್ದರು. 2016ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್ ವೆಲ್ತ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲೂ ಚಿನ್ನದ ಪದಕ ಜಯಿಸಿದ್ದರು. 2017ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದ ಗುರುರಾಜ್ ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಇನ್ನು ಕಳೆದ ವರ್ಷ 2021ರಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಗುರುರಾಜ್ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಮತ್ತೊಂದು ಕಾಮನ್ವೆಲ್ತ್ ಗೇಮ್ಸ್ಗೆ ಗುರು ಸಜ್ಜು
ಗುರುರಾಜ್ ಈ ವರ್ಷ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಸಜ್ಜಾಗುತ್ತಿದ್ದಾರೆ. ಸದ್ಯ ಪಾಟಿಯಾಲಾದಲ್ಲಿ ದೇಶದ ಅಗ್ರ ಕೋಚ್ಗಳ ಮಾರ್ಗದರ್ಶನದಲ್ಲಿ ಗುರುರಾಜ್ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಕಳೆದ ಬಾರಿ ಪದಕ ಗೆದ್ದುಕೊಂಡಿದ್ದ ಗುರುರಾಜ್ ಈ ಬಾರಿಗೂ ಅಂಥಾದ್ದೇ ಸಾಧನೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಈ ಬಾರಿ ಗುರುರಾಜ್ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವಿಭಾಗ ಹೆಚ್ಚು ಸವಾಲಿನಿಂದ ಕೂಡಿದ್ದು ಈ ಬಾರಿಯೂ ಪದಕ ಗೆಲ್ಲಲು ಸರ್ವ ಪ್ರಯತ್ನ ಮಾಡಲಿದ್ದೇನೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಗುರುರಾಜ್. ಬರ್ಮಿಂಗ್ಹ್ಯಾಮ್ನಲ್ಲಿ ಜುಲೈ 28ರಿಂದ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಲಿದ್ದು ಆಗಸ್ಟ್ 8ರಂದು ಅಂತ್ಯವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications