
ನವದೆಹಲಿ, ಜುಲೈ 12: ಈ ಬಾರಿಯ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ತಡವಾಗುವ ಸಾಧ್ಯತೆಯಿದೆ. ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವ ಕಾರಣ ಈ ಪ್ರಶಸ್ತಿಗೆ ಒಲಿಂಪಿಕ್ಸ್ ಪದಕ ವಿಜೇತರನ್ನು ಕೂಡ ಸೇರ್ಪಡೆಗೊಳಿಸುವ ದೃಷ್ಟಿಯಿಂದ ಈ ಪ್ರಶಸ್ತಿ ಪ್ರಕ್ರಿಯೆ ತಡವಾಗಲಿದೆ ಎಂದು ವರದಿಯಾಗಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಬವಾಗಲಿದ್ದು ಆಗಸ್ಟ್ 8ರಂದು ಅಂತ್ಯವಾಗಲಿದೆ.
ಈ ಬಗ್ಗೆ ಕ್ರೀಡಾ ಸಚಿವಾಲಯದ ಮೂಲಗಳು ಪಿಟಿಐಗೆ ಮಾಹಿತಿಯನ್ನು ನೀಡಿದೆ. "ಈ ಬಾರಿಯ ಕ್ರೀಡಾ ಪ್ರಶಸ್ತಿಗೆ ನಾವು ಈಗಾಗಲೇ ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ. ನಾಮನಿರ್ದೇಶನಕ್ಕೆ ಈಗ ದಿನಾಂಕ ಅಂತ್ಯವಾಗಿದೆ. ಆದರೆ ನಮ್ಮ ಕೊನೆಯ ಸಭೆಯಲ್ಲಿ ಒಲಿಂಪಿಕ್ಸ್ ಪದಕ ವಿಜೇತರನ್ನು ಈ ಪ್ರಶಸ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಲಾಯಿತು" ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ.
"ಒಲಿಂಪಿಕ್ಸ್ 8ನೇ ತಾರೀಕಿಗೆ ಅಂತ್ಯವಾಗಲಿರುವ ಕಾರಣ ಪ್ರಶಸ್ತಿ ಪಡೆದವರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಕೂಡ ತಡವಾಗಲಿದೆ" ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಟೂರ್ನಿ ಅಂತ್ಯವಾದ ಹತ್ತು ದಿನಗಳ ಒಳಗಾಗಿ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆ ಸೇರಿ ವಿಶಸ್ತಿ ವಿಜೇತರ ಹೆಸರನ್ನು ಅಂತಿಮಗೊಳಿಸಲು ವಿಫಲರಾದರೆ ಪ್ರಶಸ್ತಿ ಪ್ರಧಾನ ಸಮಾರಂಭ ಕೂಡ ತಡವಾಗುವ ಸಂಭವವಿದೆ.
"ಈ ವಿಚಾರವಾಗಿ ನಾನು ಶೀಘ್ರದಲ್ಲಿಯೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ. ಒಲಿಂಪಿಕ್ಸ್ ಅಂತ್ಯವಾದ ತಕ್ಷಣವೇ ನಾವು ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತೊಂದು ಸಭೆಯನ್ನು ನಡೆಸಲಿದ್ದೇವೆ. ಯಾವುದೇ ಕ್ರೀಡಾಪಟು ಪದಕ ಗೆಲ್ಲಲು ಸಾಧ್ಯವಾದರೆ ಅವರನ್ನು ಪ್ರಶಸ್ತಿಗೆ ಖಂಡಿತಾ ಪರಿಗಣಿಸಲಾಗುತ್ತದೆ" ಎಂದು ಕ್ರೀಡಾ ಸಚಿವಾಲಯದ ಅಧಿಕಾರಿ ಪಿಟಿಐಗೆ ಮಾಹಿತಿಯನ್ನು ಮಾಡಿದ್ದಾರೆ.
"ಒಲಿಂಪಿಕ್ಸ್ ಮುಕ್ತಾಯವಾಗಿ ಒಂದು ವಾರ ಅಥವಾ ಹತ್ತು ದಿನಗಳ ಒಳಗಾಗಿ ನಾವು ಸಭೆ ನಡೆಸಲು ಸಾಧ್ಯವಾದರೆ ಆಗಸ್ಟ್ 29ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇಲ್ಲವಾದರೆ ಕೆಲ ದಿನಗಳ ಕಾಲ ಈ ಕಾರ್ಯಕ್ರಮವನ್ನು ಮುಂದೂಡುವ ಸಾಧ್ಯತೆಯಿದೆ" ಎಂದು ಮೂಲಗಳು ಮಾಹಿತಿ ನೀಡಿದೆ. ಪ್ರತೀ ವರ್ಷವೂ ಈ ಕ್ರೀಡಾ ಪ್ರಶಸ್ತಿಯನ್ನು ಹಾಕಿ ದಂತಕತೆ ಧ್ಯಾನ್ ಚಂದ್ ಅವರ ಹುಟ್ಟಿದ ದಿನವಾದ ಆಗಸ್ಟ್ 29ರಂದು ನೀಡಿಕೊಂಡು ಬರಲಾಗಿದೆ.