ಇಂದು ಆಗಸ್ಟ್ 29, ದೇಶಾದ್ಯಂತ ರಾಷ್ಟ್ರೀಯ ಕ್ರೀಡಾದಿನವನ್ನು ಸಂಭ್ರಮ ಮನೆಮಾಡಿದೆ. ರಾಷ್ಟ್ರ ಕಂಡ ಸರ್ವಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ಮೂಲಕ ದಿಗ್ಗಜ ಕ್ರೀಡಾಪಟುವಿನ ನೆನಪಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದೆ.
ಭಾರತ ಕ್ರೀಡಾಕ್ಷೇತ್ರದ ಕೆಲವೇ ಕ್ರೀಡೆಗಳಲ್ಲಿ ಮಾತ್ರವೇ ಹೇಳಿಕೊಳ್ಳುವಂತಾ ಸಾಧನೆ ಮಾಡಿದೆ. ಕ್ರೀಡಾ ವಿಭಾಗಕ್ಕೆ ದೊಡ್ಡ ಮಟ್ಟದ ಬೆಂಬಲ ಭಾರತದಲ್ಲಿ ಇಲ್ಲದೇ ಇದ್ದಿದ್ದು ಇದಕ್ಕೆ ಕಾರಣ. ಆದರೆ ಕಳೆದ ಒಂದೆರಡು ದಶಕಗಳಿಂದ ಇದು ಬದಲಾಗುತ್ತಿದೆ. ಅದರಲ್ಲೂ ಇತ್ತೀನ ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಭರವಸೆಗಳು ಮೂಡುತ್ತಿದೆ. ಸ್ಥಳೀಯ ಮಟ್ಟದಿಂದಲೇ ಕ್ರೀಡೆಗಳಿಗೆ ಪೂರಕವಾದ ವಾತಾವರಣಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಈ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ದಿಗ್ಗಜ ಹಾಕಿ ಪಟು ಮೇಜರ್ ರ್ಧಯಾನ್ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನ ಎಂದು ಘೋಷಣೆ ಮಾಡಲಾಗಿದೆ. 2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಯಿತು. ಅದೇ ವರ್ಷ ರಾಷ್ಟ್ರೀಯ ಕ್ರೀಡಾದಿನವನ್ನು ರಾಷ್ಟ್ರೀಯ ದಿನಗಳ ಪಟ್ಟಿಗೆ ಕೂಡ ಸೇರಿಸಲಾಗಿತ್ತು.
ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಆಗಸ್ಟ್ 29, 1905ರಲ್ಲಿ ಅಹ್ಮದಾಬಾದ್ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ ಅತ್ಯತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಭೂಪಟದಲ್ಲಿ ಮೊದಲ ಬಾರಿಗೆ ಭಾರತ ಮಿನುಗುವಂತೆ ಮಾಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಒಂದಲ್ಲ ಎರಡಲ್ಲ ಮೂರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದರು.
ಧ್ಯಾನ್ಚಂದ್ ಅವರ ಅಮೋಘ ಆಟದಿಂದಾಗಿ ಭಾರತ 1928ರ ಆ್ಯಮ್ಸ್ಟರ್ಡ್ಯಾಮ್, 1932ರ ಲಾಸ್ ಏಂಜಲೀಸ್ ಮತ್ತು 1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಭಾರತವು ಸತತ ಮೂರು ಒಲಿಂಪಿಕ್ ಹಾಕಿ ಚಿನ್ನದ ಪದಕ ಗೆದ್ದು ಬೀಗಿತ್ತು. 1928ರ ಫೈನಲ್ನಲ್ಲಿ ಭಾರತ ಆತಿಥೇಯ ನೆದರ್ಲೆಂಡ್ಸ್ ತಂಡವನ್ನು 3-0 ಅಂತರದಿಂದ ಸೋಲಿಸಿ ಈ ಚಿನ್ನದ ಪದಕದ ಸಾಧನೆ ಮಾಡಿದ್ದರೆ 1932ರ ಚಿನ್ನದ ಪದಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಊಹಿಸಲೂ ಸಾಧ್ಯವಾಗದಂತೆ 24-1 ಅಂತರದಿಂದ ಸೋಲಿಸಿ ಪದಕ ಗೆದ್ದಿತ್ತು. ಇನ್ನು 1936ರಲ್ಲಿ ಜರ್ಮನಿ ವಿರುದ್ಧ 8-1 ಗೋಲುಗಳಿಂದ ಫೈನಲ್ನಲ್ಲಿ ಮಣಿಸಿತು. ಒಟ್ಟಾರೆಯಾಗಿ, ಧ್ಯಾನ್ ಚಂದ್ 12 ಒಲಿಂಪಿಕ್ ಪಂದ್ಯಗಳನ್ನು ಆಡಿ 33 ಗೋಲುಗಳನ್ನು ಗಳಿಸಿದರು.
ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು, ವಿವಿಧ ಕ್ರೀಡಾ ಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಸಂದೇಶಗಳನ್ನು ನೀಡಿದ್ದಾರೆ. ಕ್ರೀಡಾಲೋಕದ ಹಲವು ಸಾಧಕರು ಆಡಲು ವಯಸ್ಸು ಅಡ್ಡಿಯಿಲ್ಲ, ಕ್ರೀಡೆಗಳ ಮೂಲಕ ಭಾರತವನ್ನು ಸದೃಢ ರಾಷ್ಟ್ರವನ್ನಾಗಿ ಮಾಡಲು ಕರೆ ನೀಡಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಯನ್ನುಂಟು ಮಾಡುವುದಾಗಿದೆ. ಅದರ ಜೊತೆಗೆ ದೈನಂದಿನ ಜೀವನದಲ್ಲಿ ದೈಹಿಕವಾಗಿ ಸಕ್ರಿಯವಾಗಿರುವಂತೆ ಪ್ರೇರೆಪಿಸುವುದು ಕೂಡ ಇದರ ಗುರಿ. 2012ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟನಾ ಆಚರಣೆಯ ನಂತರ, ವಿವಿಧ ಕ್ರೀಡೆ-ಸಂಬಂಧಿತ ಯೋಜನೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಆರಂಭಿಸಿತ್ತು. ಇದರ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಖೇಲೋ ಇಂಡಿಯಾ ಅಭಿಯಾನವನ್ನು ಘೋಷಿಸಿದರು.