ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಮೋಘ ಸಾಧನೆ ಮಾಡಿರುವ ಭಾರತದ ನೀರಜ್ ಚೋಪ್ರಾ, ತವರಿಗೆ ಮರಳುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಸ್ಟಾರ್ ಅಥ್ಲೀಟ್ ಜರ್ಮನಿಗೆ ಪ್ರಯಾಣ ಬೆಳೆಸಲಿದ್ದಾರೆ. ಹಾಗಿದ್ದರೆ ನೀರಜ್ ಅಲ್ಲಿ ಹೊರಟ್ಟಿದ್ದು ಏಕೆ ಎಂಬ ಬಗ್ಗೆ ವರದಿ ಇಲ್ಲಿದೆ.
ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯ ಬಂಗಾರದ ಪದಕ ಪಾಕಿಸ್ತಾನದ ಅರ್ಷದ್ ನದೀಮ್ ಪಾಲಾಗಿದೆ. ಅರ್ಷದ್ ನದೀಮ್ ಫೈನಲ್ನಲ್ಲಿ 92.97 ಮೀಟರ್ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದ್ದರು. ಈಗ ಬಂಗಾರದ ಪದಕ ವಿಜೇತ ಕ್ರೀಡಾ ಪಟು ಪಾಕ್ಗೆ ಮರಳಿದ್ದಾರೆ. ಆದರೆ ನೀರಜ್ ಇನ್ನು ಭಾರತದತ್ತ ಮುಖ ಮಾಡಿಲ್ಲ.

ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪಂದ್ಯದ ನಂತರ, ತೊಡೆಸಂದು ಗಾಯದಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದರು. ಈಗ ಅವರ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದು ನೀರಜ್ ತಿಳಿಸಿದ್ದರು. ಹೀಗಾಗಿ ಅವರು ಒಲಿಂಪಿಕ್ಸ್ ಕ್ರೀಡಾ ಕೂಟ ಮುಗಿಯುತ್ತಿದ್ದಂತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ನೀರಜ್ ಒಳ ತೊಡೆಯ ಸ್ನಾಯು ಸೆಳೆತ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಫೈನಲ್ ಪಂದ್ಯದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದರು. ಅಲ್ಲದೆ ಈ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ವೈದ್ಯಕೀಯ ಸಲಹೆಯನ್ನು ಪಡೆಯುವದಾಗಿ ಬಹಿರಂಗ ಪಡಿಸಿದ್ದರು. ಹೀಗೆನಾದರೂ ಆದಲ್ಲಿ ನೀರಜ್ ಕೆಲವು ದಿನಗಳ ಕಾಲ ಟ್ರ್ಯಾಕ್ನಿಂದ ದೂರ ಉಳಿಯಬೇಕಾಗುತ್ತದೆ.
ನೀರಜ್ ಚೋಪ್ರಾ ಒಲಿಂಪಿಕ್ಸ್ ಕ್ರೀಡಾ ಕೂಟ ಮುಗಿದ ಬಳಿಕ ಜರ್ಮನಿಗೆ ತೆರಳಿದ್ದಾರೆ. ಈ ವೇಳೆ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ವೈದ್ಯಕೀಯ ಸಲಹೆ ಪಡೆಯಲಿದ್ದಾರೆ. ಅಲ್ಲದೆ ಮುಂಬರುವ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಭಾಗವಹಿಸಬೇಕೋ, ಬೇಡವೋ ಎಂಬ ಬಗ್ಗೆ ಈ ವೇಳೆ ನಿರ್ಧಾರ ಕೈಗೊಳ್ಳಲಾಗುವುದು. ಸೆ.14 ರಂದು ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ನಲ್ಲಿ ಆಡುವುದು ಅವರಿಗೆ ಕಷ್ಟ ಎಂದು ಹೇಳಲಾಗುತ್ತಿದೆ.
ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಪದಕ ಸಾಧನೆ ಮಾಡಿದ ಬಳಿಕ ತವರಿಗೆ ಮರಳುತ್ತಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನೀರಜ್ ಒಂದು ತಿಂಗಳ ಬಳಿಕ ಭಾರತಕ್ಕೆ ಮರಳಬಹುದು ಎಂದು ಸಹ ಹೇಳಿವೆ. ನೀರಜ್ ಜರ್ಮನಿಗೆ ಪ್ರವಾಸ ಬೆಳಿಸಿರುವ ಮಾಹಿತಿಯನ್ನು ಒಲಿಂಪಿಕ್ ಅಸೋಸಿಯೇಷನ್ (ಐಒಎ) ಸಹ ಖಚಿತ ಪಡಿಸಿದೆ.
ನೀರಜ್ ಚೋಪ್ರಾ ಕೆಲ ಸಮಯದಿಂದ ಗಾಯದಿಂದ ಬಳಲುತ್ತಿದ್ದಾರೆ. ಗಾಯದಿಂದಾಗಿ ಅವರು ಒಲಿಂಪಿಕ್ಸ್ಗೂ ಮುನ್ನ ಕೆಲವು ಟೂರ್ನಿಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ..