ಪಂಚುಕುಲದ ಟೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎನ್ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆ ಸ್ಥಳಾಂತರಗೊಂಡಿದೆ. ಈ ಸ್ಪರ್ಧೆಯನ್ನು ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಅವರ ಹೆಸರಿನಲ್ಲಿ ಮೊದಲ ಬಾರಿಗೆ ಆಯೋಜಸಲಾಗುತ್ತಿದೆ. ಜಾವೆಲಿನ್ ಸ್ಪರ್ಧೆಯನ್ನು ಪಂಚುಕುಲದಿಂದ ಬೆಂಗಳೂರಿಗೆ ಸ್ಥಳಾಂತರಿಸಿರುವ ಬಗ್ಗೆ ನೀರಜ್ ಚೋಪ್ರಾ ಮಾಹಿತಿ ನೀಡಿದ್ದಾರೆ.
ಮೇ 24 ರಂದು ಟೌ ದೇವಿ ಲಾಲ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಎನ್ಸಿ ಕ್ಲಾಸಿಕ್ ಈಗ ಅದೇ ದಿನ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವ ಅಥ್ಲೆಟಿಕ್ಸ್ ಈವೆಂಟ್ ಕ್ಯಾಲೆಂಡರ್ನಲ್ಲಿಯೂ ಈ ಬದಲಾವಣೆಯನ್ನು ದೃಢಪಡಿಸಲಾಗಿದೆ.

ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ "ಗೋಲ್ಡನ್ ಬಾಯ್ ಖ್ಯಾತಿಯ' ನೀರಜ್ ಚೋಪ್ರಾ ಅವರು, ಎನ್ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆ ಸ್ಥಳಾಂತರಗೊಂಡಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಆರಂಭಿಕ ಪಟ್ಟಿಯನ್ನೂ ಬಹಿರಂಗಪಡಿಸಿದ್ದಾರೆ. ಎರಡು ಬಾರಿ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಈ ಕ್ರೀಡಾಕೂಟದ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ.
ಆಂಡರ್ಸನ್ ಪೀಟರ್ಸ್ ಅವರಲ್ಲದೆ, ಜರ್ಮನಿಯ ಮಾಜಿ ಒಲಿಂಪಿಕ್ ಚಾಂಪಿಯನ್ ಥಾಮಸ್ ರೋಹ್ಲರ್, ಕೀನ್ಯಾದ ಮಾಜಿ ವಿಶ್ವ ಚಾಂಪಿಯನ್ ಜೂಲಿಯಸ್ ಯೆಗೊ ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ ಕೂಡ ಎನ್ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಇದೇ ವೇಳೆ ನೀರಜ್ ಚೋಪ್ರಾ ಅವರಿಗೆ, ಪಾಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಅವರು ಎನ್ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನೀರಜ್, ಎಲ್ಲಾ ಕ್ರೀಡಾಪಟುಗಳಿಗೆ ಆಹ್ವಾನ ಕಳುಹಿಸಿರುವಂತೆ ಅರ್ಷದ್ ಅವರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಅರ್ಷದ್ ತಮ್ಮ ತರಬೇತುದಾರರೊಂದಿಗೆ ಚರ್ಚಿಸಲಿದ್ದಾರೆ. ಸದ್ಯಕ್ಕೆ ಅವರ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಆದರೆ ಸಂಪೂರ್ಣ ಕ್ರೀಡಾಪಟುಗಳ ಪಟ್ಟಿಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನೀರಜ್ ಹೇಳಿದ್ದಾರೆ.
ಎನ್ಸಿ ಕ್ಲಾಸಿಕ್ ಜಾವೆಲಿನ್ ಸ್ಪರ್ಧೆಯಲ್ಲಿ ಮೂರು ಅಥವಾ ನಾಲ್ಕು ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕ್ರೀಡಾಪಟುಗಳಿಗೆ ಟೋಕಿಯೊದಲ್ಲಿ 2025 ರಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು ಕೆಲವು ಅಂಕಗಳನ್ನು ಗಳಿಸಲು ಇದು ಒಂದು ಉತ್ತಮ ಅವಕಾಶವಾಗಿದೆ.