2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡದ ಪರ ಆಡುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದಾರೆ ಮತ್ತು ಅವರ ಸಾಹಸದಿಂದ ಕಿವೀಸ್ ಸೆಮಿಫೈನಲ್ ಆಡುವ ಅವಕಾಶ ಪಡೆದಿದೆ.
ರಚಿನ್ ರವೀಂದ್ರ ಅವರ ತಂದೆ-ತಾಯಿ ಮೂಲತಃ ಭಾರತದವರು, ಅದರಲ್ಲೂ ಕರ್ನಾಟಕದ ರಾಜಧಾನಿ ಬೆಂಗಳೂರಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ಈ ಬಾರಿಯ ವಿಶ್ವಕಪ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ರಚಿನ್ ರವೀಂದ್ರ ಅವರ ಕುಟುಂಬ ಈಗಲೂ ಬೆಂಗಳೂರಿನಲ್ಲೇ ಇದೆ.

ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗನಾಗಿದ್ದಾನೆ. ಅಲ್ಲಿಯೇ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲೆಂಡ್ಗೆ ತೆರಳಿ ಆ ಬಳಿಕ ಅಲ್ಲಿಯೇ ನೆಲೆಸಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಾರೆ.
ಇನ್ನು ಗುರುವಾರದಂದು ನ್ಯೂಜಿಲೆಂಡ್ ತಂಡಕ್ಕೆ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಪಂದ್ಯವಿತ್ತು. ಇದಕ್ಕೂ ಮುನ್ನ ರಚಿನ್ ರವೀಂದ್ರ ಅವರು ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ.

ಇಲ್ಲಿ ಅವರ ಅಜ್ಜಿ ರಚಿನ್ರನ್ನು ಕುರ್ಚಿಯಲ್ಲಿ ಕೂರಿಸಿ ದೃಷ್ಟಿ ತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಾರ್ಥನೆ ಮೂಲಕ ದೇವರಿಗೆ ಪೂಜೆ ಸಲ್ಲಿಸಿ ರಚಿನ್ ರವೀಂದ್ರ ಆಟದ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳಬಾರದು ಎಂಬಂತೆ ದೃಷ್ಟಿ ತೆಗೆದಿದ್ದಾರೆ.
ಶ್ರೀಲಂಕಾ ತಂಡವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ 2023ರ ವಿಶ್ವಕಪ್ನ ಸೆಮಿಫೈನಲ್ಗೆ ಬಹುತೇಕ ಅರ್ಹತೆ ಪಡೆದಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ 10 ಅಂಕ ಗಳಿಸಿದೆ. ಕಿವೀಸ್ ತಂಡದ ರನ್ರೇಟ್ ಕೂಡ ಉತ್ತಮವಾಗಿದೆ.
ನ್ಯೂಜಿಲೆಂಡ್ನ ಈ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಆಸೆಯನ್ನು ಬಹುತೇಕ ಭಗ್ನಗೊಳಿಸಿದೆ. ಈ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಮೂಲದ ಕಿವೀಸ್ ಸ್ಟಾರ್ ಯುವ ಆಟಗಾರ ರಚಿನ್ ರವೀಂದ್ರ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದರು.

ಇದೇ ವೇಳೆ ಒಂದೇ ವಿಶ್ವಕಪ್ ಅವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. 1996ರ ವಿಶ್ವಕಪ್ನಲ್ಲಿ 23 ವರ್ಷದವರಾಗಿದ್ದ ಸಚಿನ್ ತೆಂಡೂಲ್ಕರ್ ಅವರ 523 ರನ್ಗಳ ದಾಖಲೆಯನ್ನು ಇದೀಗ ರಚಿನ್ ರವೀಂದ್ರ ಹಿಂದಿಕ್ಕಿದ್ದಾರೆ.
ರಚಿನ್ ರವೀಂದ್ರ ಪ್ರಸಕ್ತ ವಿಶ್ವಕಪ್ನಲ್ಲಿ ಕಿವೀಸ್ ಪರ ಅತಿ ಹೆಚ್ಚು ರನ್ ಸ್ಕೋರರ್ ಸಹ ಆಗಿದ್ದಾರೆ. ಈ ಆವೃತ್ತಿಯ ವಿಶ್ವಕಪ್ನಲ್ಲಿ 9 ಪಂದ್ಯಗಳ ಲೀಗ್ ಅಂತ್ಯಕ್ಕೆ 565 ರನ್ ಗಳಿಸುವ ಮೂಲಕ ಚೊಚ್ಚಲ ವಿಶ್ವಕಪ್ನಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ ಅತಿ ಕಿರಿಯ ಆಟಗಾರರಾಗಿದ್ದಾರೆ.
2023ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವು ಭಾರತ ತಂಡವನ್ನು ಎದುರಿಸುವು ಬಹುತೇಕ ಪಕ್ಕಾ ಆಗಿದೆ. ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ಉಭಯ ತಂಡಗಳ ನಡುವೆ ಮೊದಲ ಸೆಮಿಫೈನಲ್ ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.