
ಸಾಗರ್ ಧಂಖರ್ ಎಂಬ 23 ವರ್ಷದ ರೆಸ್ಲರ್ ಓರ್ವನ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದಡಿ 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ರೆಸ್ಲರ್ ಸುಶೀಲ್ ಕುಮಾರ್ನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕೊಲೆ ಆರೋಪ ತನ್ನ ಮೇಲೆ ಕೇಳಿ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಮತ್ತು ಅಜಯ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಮೂರು ವಾರಗಳಿಂದ ದೆಹಲಿ ಪೊಲೀಸರು ಬೆನ್ನಟ್ಟಿ ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಸುಶೀಲ್ ಕುಮಾರ್ ಪತ್ತೆಗೆ ಸುಳಿವು ನೀಡಿದವರಿಗೆ ನಗದು ಬಹುಮಾನವನ್ನು ಸಹ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ದಿನದಿಂದ ದಿನಕ್ಕೆ ಜಾಗ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್ಸಿಬಿ ಆಟಗಾರರು
ಮೇ 4ರಂದು ಸಾಗರ್ ಧಂಖರ್ ಎಂಬ ರೆಸ್ಲರ್ ಕೊಲೆಯಲ್ಲಿ ಸುಶೀಲ್ ಕುಮಾರ್ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರ ಬಳಿ ಸಾಕ್ಷ್ಯಗಳಿವೆ ಎಂಬ ಮಾಹಿತಿ ಇದೆ. ಮೇ 4ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಸುಶೀಲ್ ಕುಮಾರ್ ಮತ್ತು ಆತನ ಸಹಚರರು ಕುಸ್ತಿಪಟು ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕ್ರೀಡಾಂಗಣದಲ್ಲಿದ್ದ ಕ್ಯಾಮೆರಾವನ್ನು ಕಿತ್ತುಹಾಕಿದ್ದಾರೆ. ಈ ಕುರಿತು ಸುಶೀಲ್ ಕುಮಾರ್ ವಿರುದ್ಧ ಸಾಕ್ಷ್ಯಗಳಿರುವ ಕಾರಣ ದೆಹಲಿ ಪೊಲೀಸರು ಅವರನ್ನು 12 ದಿನಗಳ ಕಾಲ ವಶಕ್ಕೆ ಪಡೆಯುವುದರ ಮೂಲಕ ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.