ಆಗಸ್ಟ್ 7 ಬುಧವಾರ, ಒಂದೇ ಆವೃತ್ತಿಯ ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಸ್ಟಾರ್ ಶೂಟರ್ ಮನು ಭಾಕರ್ ಭಾರತಕ್ಕೆ ಬಂದಿಳಿದಿದ್ದಾರೆ. ತುಂತುರು ಮಳೆ ನಡುವೆಯೂ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನು ಭಾಕರ್ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ.
ನೂರಾರು ಜನರು ಮತ್ತು ಕುಟುಂಬಸ್ಥರು ಮನು ಭಾಕರ್ ಅವರನ್ನು ಅದ್ದೂರಿ ಬರ ಮಾಡಿಕೊಂಡಿದ್ದಾರೆ. ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆ ಎರಡರಲ್ಲೂ ಕಂಚಿನ ಪದಕ ಗೆದ್ದು ವಿಶೇಷ ದಾಖಲೆ ಬರೆದಿದ್ದಾರೆ.

ಪ್ಯಾರಿಸ್ನಿಂದ ಮನು ಭಾಕರ್ ಏರ್ ಇಂಡಿಯಾ ವಿಮಾನದ (AI 142) ಮೂಲಕ ಬೆಳಗ್ಗೆ 9:20 ಗಂಟೆಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಒಂದು ಗಂಟೆ ತಡವಾಗಿ ಬಂದ ವಿಮಾನವನ್ನು ಕಾದು ಕುಳಿತ್ತಿದ್ದ ನೂರಾರು ಮಂದಿ ಮನು ಭಾಕರ್ ಮತ್ತು ಅವರ ಕೋಚ್ ಜಸ್ಪಾಲ್ ರಾಣಾ ಅವನ್ನು ಸ್ವಾಗತಿಸಿದರು.
ಮಗಳ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಮನು ಭಾಕರ್ ತಂದೆ ನಾರಾಯಣ್ ಸಿಂಗ್ ರಾಣಾ ಸಂತಸ ವ್ಯಕ್ತಪಡಿಸಿದರು. ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಮಗಳು ಮರಳಿ ಬರುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಈ ಅದ್ಭುತ ಹಿಂದೆಂದೂ ನಡೆದಿರಲಿಲ್ಲ. ಆಕೆಗೆ ಈಗ ಕೇವಲ 22 ವರ್ಷ ಎಂದು ನಾರಾಯಣ್ ಸಿಂಗ್ ರಾಣಾ ಹೇಳಿದರು. ಈ ಹಿಂದೆ ನಾರಾಯಣ್ ಸಿಂಗ್ ರಾಣಾ ಉತ್ತರಖಂಡದ ಮಾಜಿ ಕ್ರೀಡಾ ಸಚಿವರಾಗಿದ್ದರು.
ಮಧ್ಯಾಹ್ನ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭಾಕರ್ ಭೇಟಿ ಮಾಡಲಿದ್ದಾರೆ. ಭಾನುವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಭಾಕರ್ ಶನಿವಾರ ಪ್ಯಾರಿಸ್ಗೆ ಹಿಂತಿರುಗಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಭಾಕರ್ ಅವರು ಭಾರತದ ಧ್ವಜಧಾರಿಗಳಲ್ಲಿ ಒಬ್ಬರಾಗಿದ್ದಾರೆ.