ಆಗಸ್ಟ್ 9 ಶುಕ್ರವಾರ, ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಅವರು ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದು, ದೇಶಕ್ಕೆ ಕೀರ್ತಿ ತಂದಿದ್ದಾರೆ. ನೀರಜ್ ತನ್ನ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಫೈನಲ್ ಪಂದ್ಯದಲ್ಲಿ ನೀರಜ್ 6 ಪ್ರಯತ್ನಗಳಲ್ಲಿ ಕೇವಲ 1 ಅನ್ನು ಯಶಸ್ವಿಯಾಗಿ ಎಸೆದರು. ಇನ್ನುಳಿದ 5 ಎಸೆತಗಳನ್ನು ಫೌಲ್ ಮಾಡಿದರು. ಇದರ ಹೊರತಾಗಿಯೂ ನೀರಜ್ ಬೆಳ್ಳಿ ಗೆದ್ದಿರುವ ಸಂತಸ ಹೆಚ್ಚಿಸಿದೆ.

ಇದಕ್ಕೂ ಮುನ್ನ ನೀರಜ್ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈ ಬಾರಿ ಬಂಗಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮ ಮುಂದೆ ಈ ಬೆಳ್ಳಿಯ ಪದಕವೂ ಚಿಕ್ಕದಾಗಿ ಕಾಣುವಷ್ಟು ಎತ್ತರಕ್ಕೆ ನೀರಜ್ ಅವರ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಈಗ ಎಲ್ಲರೂ ನೀರಜ್ ಅವರಿಂದ ನಿರೀಕ್ಷಿಸುತ್ತಿರುವುದು ಬಂಗಾರವನ್ನು ಮಾತ್ರ. ಇದರ ಹೊರತಾಗಿಯೂ ನೀರಜ್ ಅವರ ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ಚಿನ್ನಕ್ಕಿಂತ ಕಡಿಮೆಯಿಲ್ಲ. ಏಕೆಂದರೆ ಬೆಳ್ಳಿ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಈಗ ವೈಯಕ್ತಿಕ ಸ್ಪರ್ಧೆಗಳಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ನಾಲ್ಕನೇ ಭಾರತೀಯ ಆಟಗಾರ ಎಂಬ ವಿಶೇಷ ದಾಖಲೆ ಬರೆದಿದ್ದಾರೆ.
ಇವರಿಗೂ ಮುನ್ನ ಸುಶೀಲ್ ಕುಮಾರ್ (ಕುಸ್ತಿ), ಪಿವಿ ಸಿಂಧು (ಬ್ಯಾಡ್ಮಿಂಟನ್) ಮತ್ತು ಮನು ಭಾಕರ್ (ಶೂಟಿಂಗ್) ಈ ಸಾಧನೆ ಮಾಡಿದ್ದಾರೆ. ಇದೀಗ ಭಾರತ ನೀರಜ್ ಚೋಪ್ರಾ ಅವರ ಬೆಳ್ಳಿಯೊಂದಿಗೆ ತನ್ನ ಖಾತೆಯಲ್ಲಿ ಒಟ್ಟು 5 ಪ್ಯಾರಿಸ್ ಒಲಿಂಪಿಕ್ಸ್ ಪದಕಗಳನ್ನು ಹೊಂದಿದೆ.
ಭಾರತದ ಪರ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ. ಮತ್ತೊಮ್ಮೆ ನೀರಜ್ ವಿಶ್ವದ ಅತ್ಯುತ್ತಮ ಜಾವೆಲಿನ್ ಎಸೆತಗಾರರಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಲ್ಲದೆ, ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ.
ನೀರಜ್ ಅವರ ಈ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಸೇರಿಸಿದೆ. ಅವರ ಅದ್ಭುತ ಪ್ರದರ್ಶನ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಇದುವರೆಗೆ ನೀರಜ್ ಗೆದ್ದಿರುವ ಪದಕಗಳ ಪಟ್ಟಿ ಇಲ್ಲಿದೆ.
ಮೊದಲ ಬಾರಿಗೆ 2017ರ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ಚಾಂಪಿಯನ್ ಆದರು. ಬಳಿಕ 2018ರಲ್ಲಿ ಸತತವಾಗಿ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದರು. ಅಲ್ಲದೆ, 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ, ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದಲ್ಲದೆ, 2022 ಮತ್ತು 2023ರ ವಿಶ್ವ ಚಾಂಪಿಯನ್ಶಿಪ್ನಲ್ಲೂ ಚಿನ್ನ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಭಾರತ ಸರ್ಕಾರವು ನೀರಜ್ ಚೋಪ್ರಾ ಅವರ ಅದ್ಭುತ ಪ್ರದರ್ಶನಕ್ಕಾಗಿ ಮೂರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 2018ರಲ್ಲಿ ಅರ್ಜುನ ಪ್ರಶಸ್ತಿ, ಟೋಕಿಯೊದಲ್ಲಿ ಚಿನ್ನದ ಪದಕವನ್ನು ಗೆದ್ದ ನಂತರ 2021ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು 2022ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.