ಉತ್ತರಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಕ್ರೀಡಾಂಗಣ 2025ರ ಡಿಸೆಂಬರ್ಗೆ ಸಂಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಇದು ಉತ್ತರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವಾಗಿರಲಿದೆ. ಕಾನ್ಪುರ ಹಾಗೂ ಲಕ್ನೋದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇದೆ.
ಈ ಕ್ರೀಡಾಂಗಣದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಹಾಗೂ ಕಪಿಲ್ದೇವ್ ಕೂಡ ಸಾಥ್ ನೀಡಿದ್ದಾರೆ. ಜೊತೆಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಈ ಕ್ರೀಡಾಂಗಣವನ್ನು ವಾರಣಾಸಿಯ ರಾಜತಲಬ್ನ ಗಂಜಾರಿ ಎಂಬ ಪ್ರದೇಶದಲ್ಲಿ 451 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಸರ್ಕಾರ ಇದರ ಭೂಸ್ವಾಧೀನಕ್ಕಾಗಿ 121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರೀಡಾಂಗಣದ ನಿರ್ಮಾಣಕ್ಕೆ 330 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಕ್ರೀಡಾಂಗಣ ಪೂರ್ವಾಂಚಲದ ಯುವಕರಿಗೆ ವರದಾನವಾಗಲಿದೆ ಎಂದಿದ್ದಾರೆ. ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಗೆ (ಯುಪಿಸಿಎ) ದೀರ್ಘಾವಧಿ ಗುತ್ತಿಗೆಗೆ ಕ್ರೀಡಾಂಗಣವನ್ನು ನೀಡಲಾಗುತ್ತದೆ.
"ಇಂದು ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಪೂರ್ವಾಂಚಲದ ಯುವಕರಿಗೆ ವರದಾನವಾಗಲಿದೆ. ಕ್ರಿಕೆಟ್ ಮೂಲಕ ಇಡೀ ವಿಶ್ವವೇ ಭಾರತದೊಂದಿಗೆ ಸಂಪರ್ಕವನ್ನು ಸಾಧಿಸುತ್ತಿದೆ. ಹೊಸ ದೇಶಗಳು ಈಗ ಕ್ರಿಕೆಟ್ ಆಡಲು ಮುಂದೆ ಬರುತ್ತಿವೆ" ಎಂದು ಪ್ರಧಾನಿ ಮೊದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇನ್ನು ಈ ಕ್ರೀಡಾಂಗಣ 30,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಏಳು ಪಿಚ್ಗಳು, ಅಭ್ಯಾಸ ನೆಟ್ಗಳು, ಲಾಂಜ್ಗಳು, ಕಾಮೆಂಟೇಟರ್ ಬಾಕ್ಸ್, ಮಾಧ್ಯಮ ಕೇಂದ್ರ ಮತ್ತು ದೊಡ್ಡ ಹಾಸ್ಟೆಲನ್ನು ಒಳಗೊಂಡಿರುತ್ತದೆ. ಕ್ರೀಡಾಂಗಣದ ವಿನ್ಯಾಸವು ವಾರಣಾಸಿಯ ಶ್ರೀಮಂತ ಪರಂಪರೆಯನ್ನು ಮತ್ತು ಶಿವನಿಗೆ ಸಂಬಂಧಿಸಿದ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಅರ್ಧಚಂದ್ರಾಕಾರದ ಗುಮ್ಮಟ, ತ್ರಿಶೂಲದ ಆಕಾರದ ಫ್ಲಡ್ಲೈಟ್ಗಳು ಮತ್ತು ವಾರಣಾಸಿಯ ಘಾಟ್ಗಳ ಮೆಟ್ಟಿಲುಗಳನ್ನು ಹೋಲುವ ಪ್ರೇಕ್ಷಕರ ಗ್ಯಾಲರಿ ಈ ಕ್ರೀಡಾಂಗಣದ ವಿಶೇಷತೆಯಾಗಿರಲಿದೆ.
ಈ ಕ್ರೀಡಾಂಗಣ ಒಮ್ಮೆ ಪೂರ್ಣಗೊಂಡ ಬಳಿಕ ಇದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅತ್ಯಾಧುನಿಕ ಸ್ಥಳವನ್ನು ಒದಗಿಸುವುದಲ್ಲದೆ ವಾರಣಾಸಿಯಲ್ಲಿ ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜನ ನೀಡುತ್ತದೆ. ಈ ಯೋಜನೆಯು ಉತ್ತರ ಪ್ರದೇಶದಲ್ಲಿ ಕ್ರಿಕೆಟ್ ಭವಿಷ್ಯದಲ್ಲಿ ಮಹತ್ವದ ಹೂಡಿಕೆಯನ್ನು ಪ್ರತಿನಿಧಿಸುತ್ತದೆ.