ಭಾರತೀಯ ಕ್ರಿಕೆಟ್ ಮಂಡಳಿ ( ಬಿಸಿಸಿಐ) ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಅಕಾಡೆಮಿಯನ್ನು ಶ್ರೀಘ್ರದಲ್ಲಿ ಆರಂಭಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು. ಈ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳು ಲಭ್ಯ ಇರುತ್ತವೆ ಎಂದು ತಿಳಿದು ಬಂದಿದೆ. ಇನ್ನು ಈ ಕ್ರೀಡಾಂಗಣವನ್ನು ಇದೇ ತಿಂಗಳು ನಡೆಯುವ ವಾರ್ಷಿಕ ಸಭೆಯಂದು ಉದ್ಘಾಟಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ಈಗ ಈ ಸುದ್ದಿಗೆ ಮತ್ತೊಂದು ಬಿಗ್ ಅಪ್ ಡೇಟ್ ಲಭ್ಯವಾಗಿದೆ.
ಸದ್ಯದ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ನೂತನ ಹೈಟೆಕ್ ಎನ್ಸಿಎ ಕ್ರೀಡಾಂಗಣವನ್ನು ಸೆಪ್ಟೆಂಬರ್ 27 ರಂದು ಉದ್ಘಾಟಿಸುವ ಸಾಧ್ಯತೆ ಇದೆ. ಇದೇ ದಿನ ಬಿಸಿಸಿಐ ತನ್ನ ವಾರ್ಷಿಕ ಸಭೆಯನ್ನು ಸಹ ಕರೆದಿದೆ. ನೂತನವಾಗಿ ನಿರ್ಮಾಣವಾಗಿರುವ ಎನ್ಸಿಎಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಎನ್ಸಿಎಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇತ್ತೀಚಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜಯ್ ಶಾ, ನೂತನ ಎನ್ಸಿಎ ಕಟ್ಟದ ಬಗ್ಗೆ ಉತ್ಸುಕತೆಯಿಂದ ಮಾತನಾಡಿದ್ದರು. ಅಲ್ಲದೆ ಇಷ್ಟು ದಿನ ಬರೀ ಕ್ರಿಕೆಟ್ ಆಟಗಾರರಿಗೆ ಮಾತ್ರ ಲಭ್ಯವಾಗಿದ್ದ ಎನ್ಸಿಎನಲ್ಲಿ ಇನ್ನು ಬೇರೆ ಕ್ರೀಡಾಪಟುಗಳು ಸಹ ಅಭ್ಯಾಸ ಮಾಡಬಹುದು ಎಂದು ತಿಳಿಸಿದ್ದರು. ಇನ್ನು ನೂತನ ಕಟ್ಟಡದಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು ಇರುವುದಾಗಿ ಜಯ್ ಶಾ ಸ್ಪಷ್ಟಪಡಿಸಿದ್ದರು.
ನೂತನವಾಗಿ ನಿರ್ಮಿಸಲಾಗಿರುವ ಎನ್ಸಿಎ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಇದರೊಳಗೆ ಮೂರು ಅಂತಾರಾಷ್ಟ್ರೀಯ ಮಟ್ಟದ ಮೈದಾನಗಳಿದ್ದು, 45 ಅಭ್ಯಾಸ ಪಿಚ್ಗಳನ್ನು ನಿರ್ಮಿಸಲಾಗಿದೆ. ಒಲಿಂಪಿಕ್ ಗಾತ್ರದ ದೊಡ್ಡ ಈಜುಕೊಳದ ವ್ಯವಸ್ಥೆಯನ್ನು ಇದು ಹೊಂದಿದೆ. 2008ರಲ್ಲಿ ಈ ನೂತನ ಎನ್ಸಿಎ ಭೂಮಿಯನ್ನು ಖರೀದಿಸಲಾಗಿತ್ತು. ಈ ಹಿಂದಿನ ಬಿಸಿಸಿಐ ಅಧಿಕಾರಿಗಳು ಇದರತ್ತ ಹೆಚ್ಚಿನ ಗಮನ ಹರಿಸಿದ್ದಿಲ್ಲ.

ವಿವಿಎಸ್ ಲಕ್ಷ್ಮಣ ಅವರನ್ನು ಎನ್ಸಿಎನಲ್ಲಿ ಮುಂದುವರೆಸುತ್ತಾರಾ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಜಯ್ ಶಾ ಲಕ್ಷ್ಮಣ್ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಸಿಸಿ ಮುಖ್ಯಸ್ಥರಾಗಿ ಆಯ್ಕೆ ಆಗಿರುವ ಕಾರಣ, ಬಿಸಿಸಿಐ ಕಾರ್ಯದರ್ಶಿ ಹುದ್ದೆ ಖಾಲಿ ಆಗಲಿದೆ. ಐಸಿಸಿ ಮುಖ್ಯಸ್ಥರಾಗಿ ಜಯ್ ಶಾ ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಆ ವರೆಗೆ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ. ಇವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆಗಳು ಹೆಚ್ಚಿವೆ.
ಈ ಸಭೆಗೆ ಈಗಾಗಲೇ 18 ಅಂಶಗಳ ಕಾರ್ಯಸೂಚಿ ಒಳಗೊಂಡಿದೆ. ಈ ಕಾರ್ಯಸೂಚಿಯಲ್ಲಿ ಐಸಿಸಿ ಸಭೆಗೆ ಬಿಸಿಸಿಐ ಪ್ರತಿನಿಧಿಗಳ ನೇಮಕ ಮಾಡುವ ವಿಷಯವೂ ಸೇರಿದೆ. ಇನ್ನು ಇದೇ ಸಭೆಯಲ್ಲಿ ಐಪಿಎಲ್ ಆಡಳಿತ ಮಂಡಳಿ ಮಹಾಸಭೆಗೆ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದೆ.