ಡೆಹ್ರಾಡೂನ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಾವು ಕ್ರೀಡೆಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಕ್ರೀಡಾ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಈ ಆಟಗಳಲ್ಲಿ, ದೇಶದ ಮೂಲೆ ಮೂಲೆಯ ಯುವಕರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಒಂದು ಭಾರತ, ಶ್ರೇಷ್ಠ ಭಾರತದ ಚಿತ್ರವನ್ನು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಜನವರಿ 28 ರಿಂದ ಫೆಬ್ರವರಿ 14ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಹಲವು ರಾಷ್ಟ್ರೀಯ ದಾಖಲೆಗಳು ಮುರಿಯುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ 9800 ಆಟಗಾರರು 36 ಕ್ರೀಡೆಗಳಲ್ಲಿ ಭಾಗವಹಿಸಲಿದ್ದು, ಒಟ್ಟು 450 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ.

ರಿಲಯನ್ಸ್ ಫೌಂಡೇಶನ್ನಿಂದ ಬೆಂಬಲ ಪಡೆಯುತ್ತಿರುವ 50ಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ತರಾಖಂಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ 38ನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಫೌಂಡೇಶನ್ನ ಕ್ರೀಡಾಪಟುಗಳು ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಜೂಡೋ, ವೇಟ್ಲಿಫ್ಟಿಂಗ್, ಕುಸ್ತಿ ಮತ್ತು ಟೇಬಲ್ ಟೆನ್ನಿಸ್ ಸೇರಿದಂತೆ ಎಂಟು ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲು ಪ್ರಯತ್ನಿಸಲಿದ್ದಾರೆ.
ರಿಲಯನ್ಸ್ ಫೌಂಡೇಶನ್ಗೆ ಸೇರಿದ ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಜೂಡೋದ ಉದಯೋನ್ಮುಖ ಆಟಗಾರ್ತಿ ಹಿಮಾಂಶಿ ಟೋಕಾಸ್ ಕೂಡ ಪದಕದ ರೇಸ್ನಲ್ಲಿದ್ದಾರೆ. ಉದಯೋನ್ಮುಖ ಅಥ್ಲೀಟ್ಗಳಾದ ಅನಿಮೇಶ್ ಕುಜೂರ್, ಡಿಎಂ ಜಯರಾಮ್, ಬಾಪಿ ಹಂಸದಾ ಮತ್ತು ಸಾಕ್ಷಿ ಚವ್ಹಾಣ್ ಅವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಜ್ಯೋತಿ ಯರ್ರಾಜಿ (100 ಮೀ ಹರ್ಡಲ್ಸ್), ತೇಜಸ್ ಶಿರ್ಸೆ (110 ಮೀ ಹರ್ಡಲ್ಸ್), ಕರ್ನಾಟಕದ ಮಣಿಕಂಠ ಹೋಬಳಿಧರ್ (100 ಮೀ), ಅಮ್ಲಾನ್ ಬೋರ್ಗೊಹೈನ್ (200 ಮೀ) ಮತ್ತು ರೋಸಿ ಮೀನಾ ಪೌಲ್ರಾಜ್ (ಪೋಲ್ ವಾಲ್ಟ್) ಸೇರಿದಂತೆ ಹಲವಾರು ರಾಷ್ಟ್ರೀಯ ದಾಖಲೆ ಹೊಂದಿರುವವರು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆ ಉತ್ಸಾಹ ಹೆಚ್ಚಾಗಿದೆ. ನಮ್ಮ ಅಥ್ಲೀಟ್ಗಳು ತಮ್ಮ ಫಿಟ್ನೆಸ್ ಬಗ್ಗೆ ನಮಗೆ ಖಾತರಿ ಇದೆ. ನಮ್ಮ ಕ್ರೀಡಾಪಟುಗಳು 2025ರಲ್ಲಿ ಏಷ್ಯನ್ ಚಾಂಪಿಯನ್ಶಿಪ್ಗೆ ತಯಾರಿ ನಡೆಸುತ್ತಿದ್ದಾರೆ" ಎಂದು ರಿಲಯನ್ಸ್ ಫೌಂಡೇಶನ್ನ ಅಥ್ಲೆಟಿಕ್ಸ್ ನಿರ್ದೇಶಕ ಜೇಮ್ಸ್ ಹಿಲಿಯರ್ ಹೇಳಿದ್ದಾರೆ.
ಬ್ಯಾಡ್ಮಿಂಟನ್ನಲ್ಲಿ ಅನುಪಮಾ ಉಪಾಧ್ಯಾಯ, ಉನ್ನತಿ ಹೂಡಾ ಮತ್ತು ಶ್ರೀಯಾನ್ಶಿ ವಲಿಶೆಟ್ಟಿ ಮೂವರು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಟೇಬಲ್ ಟೆನಿಸ್ ದಿಗ್ಗಜ ಜಿ ಸತ್ಯನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.