ಭಾರತದ ಚೆಸ್ ಗ್ರ್ಯಾಂಡ್ಮಾಸ್ಟರ್ ಪ್ರಜ್ಞಾನಂದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಚೆಸ್ ವಿಶ್ವಕಪ್ನ ಫೈನಲ್ನಲ್ಲಿ ದಿಗ್ಗಜ ಆಟಗಾರ ವಿಶ್ವದ ನಂಬರ್ 1 ಕಾರ್ಲ್ಸನ್ ಮ್ಯಾಗ್ನಸ್ಗೆ ಬಲಿಷ್ಠ ಪೈಪೋಟಿ ನೀಡಿ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡ ಬಳಿಕ ಪ್ರಜ್ಞಾನಂದ ಪ್ರಧಾನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಜ್ಞಾನಂದ ವಿಶ್ವಕಪ್ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ನೋಡಿ ಸಂತಸಪಟ್ಟಿದ್ದಾರೆ.
ಪ್ರಜ್ಞಾನಂದ ತಮ್ಮ ತಾಯಿ ನಾಗಲಕ್ಷ್ಮೀ ಹಾಗೂ ತಂದೆ ರಮೇಶ್ ಬಾಬು ಜೊತೆಗೆ ಪ್ರಧಾನಿಯನ್ನು ಭೇಟಿಯಾಗಿದ್ದರು. ದೆಹಲಿಯಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಈ ಭೇಟಿ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿಯ ಟ್ವಿಟ್ಟರ್ ಖಾತೆಯಲ್ಲಿ ಫೊಟೊಗಳನ್ನು ಹಂಚಿಕೊಂಡಿದ್ದಾರೆ.

FIDE ವಿಶ್ವಕಪ್ ಫೈನಲ್ ಟೈಬ್ರೇಕರ್ನಲ್ಲಿ ಭಾರತದ ಪ್ರಜ್ಞಾನಂದ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ನಾರ್ವೆಯ ದಿಗ್ಗಜ ಆಟಗಾರ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಚಾಂಪಿಯನ್ ಪಟ್ಟವನ್ನು ಅಲಂಕರಿಸುವವರು ಯಾರು ಎಂದು ನಿರ್ಧರಿಸುವ ಈ ಟೈಬ್ರೇಕರ್ ತೀವ್ರ ಪೈಪೊಟಿಯಿಂದ ಕೂಡಿತ್ತು. ಈ ನಿರ್ಣಾಯಕ ಸೆಣೆಸಾಟದಲ್ಲಿ ಚೆಸ್ನ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಳ್ಳುವ ಕಾರ್ಲ್ಸನ್ ತನ್ನ ಅನುಭವದ ಆಟವನ್ನು ಆಡುವ ಮೂಲಕ ಭಾರತದ 18ರ ಹರೆಯದ ಯುವ ಆಟಗಾರನಿಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ರ್ಯಾಪಿಡ್ನಲ್ಲಿ ಪ್ರಜ್ಞಾನಂದ ವಿರುದ್ಧ ಕಾರ್ಲ್ಸನ್ ಗೆಲುವು ಸಾಧಿಸುವ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿದರು. ಕಪ್ಪು ಕಾಯಿಗಳೊಂದಿಗೆ ಆಡಿದ ಕಾರ್ಲ್ಸನ್ 47 ನಡೆಗಳ ಆಟದಲ್ಲಿ ಗೆಲುವು ಸಾಧಿಸಿದ್ದರು. ಆರಂಭದಲ್ಲಿ ಹಿನ್ನಡೆ ಕಂಡಿದ್ದರೂ 27ನೇ ನಡೆಯ ಬಳಿಕ ಕೆಲ ಅದ್ಭುತ ಹೆಜ್ಜೆಗಳನ್ನು ಇಡುವ ಮೂಲಕ ತಮ್ಮ ಸ್ಥಿತಿಯನ್ನು ಉತ್ತಮ ಪಡಿಸಿಕೊಂಡಿದ್ದರು ಪ್ರಜ್ಞಾನಂದ. ಹೀಗಾಗಿ ಇಬ್ಬರು ಕುಡ ತೀವ್ರ ಜಿದ್ದಾಜಿದ್ದಿನ ಸೆಣೆಸಾಟ ನಡೆಸಿದರು. ಆದರೆ ಅಂತಿಮ ನಂತರ ಕಾರ್ಲ್ಸನ್ ಕೈ ಮೇಲಾಗುತ್ತಾ ಸಾಗಿತ್ತು. ಹೀಗಾಗಿ ಪ್ರಜ್ಞಾನಂದ ಚಾಂಪಿಯನ್ ಕನಸು ನನಸಾಗಬೇಕಿದ್ದರೆ ಎರಡನೇ ರ್ಯಾಪಿಡ್ನಲ್ಲಿ ವಿಶ್ವದ ನಂಬರ್ ೧ ಆಟಗಾರನ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು.
ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಮತ್ತು ವಿಶ್ವದ ನಂಬರ್ 1 ಮ್ಯಾಗ್ನಸ್ ವಿರುದ್ಧದ FIDE ವಿಶ್ವಕಪ್ನ ಫೈನಲ್ನ ಮೊದಲ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿದ್ದವು. ಹೀಗಾಗಿ ಇಬ್ಬರು ಆಟಗಾರರು ಕೂಡ ತಮ್ಮ ಅದೃಷ್ಟವನ್ನು ಟೈಬ್ರೇಕರ್ನಲ್ಲಿ ಇಂದು ನಿರ್ಧರಿಸಬೇಕಾಗಿತ್ತು. ಕ್ಷಿಕರ್ ಟೈಮ್ ಕಂಟ್ರೋಲ್ ಮಾದರಿಯಲ್ಲಿ ನಡೆದ ಈ ಟೈ ಬ್ರೇಕರ್ನ ಮೊದಲ ಪಂದ್ಯವನ್ನು ಕಾರ್ಲ್ಸನ್ ಗೆದ್ದು 1-0 ಮುನ್ನಡೆ ಸಾಧಿಸಿದ್ದರು.