
ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಪ್ನಾ ಗಿಲ್ ಎಂಬಾಕೆಯನ್ನು ಪೊಲೀಸರು ಇಂದು ಕೋರ್ಟ್ಗೆ ಹಾಜರುಪಡಿಸಿದ್ದು ಅಂಧೇರಿ ಕೋರ್ಟ್ ಆಕೆಯ ಪೊಲೀಸ್ ಕಸ್ಟಡಿ ಅವಧಿಯನ್ನು ಫೆಬ್ರವರಿ 20ರವರೆಗೆ ವಿಸ್ತರಿಸಿದೆ.
ಇನ್ನು ಈ ಪ್ರಕರಣದ ಬಗ್ಗೆ ಸಪ್ನಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು ಕ್ರಿಕೆಟಿಗ ಪೃಥ್ವಿ ಶಾ ಮೇಲೆಯೇ ದೈಹಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಬಗ್ಗೆ ಗಿಲ್ ವಕೀಲರಾದ ಅಲಿ ಕಾಶಿಫ್ ಮಾತನಾಡಿದ್ದು "ಪೃಥ್ವಿ ಶಾ ಸಪ್ನಾ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಪೃಥ್ವಿ ಶಾ ಅವರ ಕೈಯಲ್ಲಿ ಒಂದು ಕೋಲು ಕೂಡ ಕಾಣಿಸಿದೆ. ಪೃಥ್ವಿ ಶಾ ಹಾಗೂ ಅವರ ಸ್ನೇಹಿತರೇ ಈ ಗುಂಪಿನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸಪ್ನಾ ಒಶಿವಾಡ ಪೊಲೀಸ್ ಠಾಣೆಯಲ್ಲಿದ್ದು ಪೊಲೀಸರು ಆಕೆಗೆ ವೈದ್ಯಕೀಯ ಚಿಕಿತ್ಸೆಗೂ ಅವಕಾಶ ನೀಡುತ್ತಿಲ್ಲ" ಎಂದು ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಬುಧವಾರ ತಡರಾತ್ರಿಯೇ ಎಫ್ಐಆರ್ ದಾಖಲಿಸಲಾಯಿತು. ಈ ಎಫ್ಐಆರ್ನಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ 8 ಮಂದಿಯ ಗುಂಪು ದಾಳಿ ಮಾಡಿದ್ದಲ್ಲದೆ ತಮ್ಮ ಕಾರನ್ನು ಬೆನ್ನಟ್ಟಿಕೊಂಡು ಬಂದಿದ್ದು ಹಣ ನೀಡದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಪೃಥ್ವಿ ಶಾ ತಮ್ಮ ಸ್ನೇಹಿತರ ಜೊತೆಗೆ ವಾಯುವ್ಯ ಮುಂಬೈನ ಸಾಂತಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ಗೆ ಊಟಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ಆರೋಪಿಗಳು ಅವರ ಬಳಿಗೆ ಬಂದು ಸೆಲ್ಫಿಗೆ ಒತ್ತಾಯಿಸಿದ್ದಾರೆ. ಮೊದಲಿಗೆ ಇಬ್ಬರು ವ್ಯಕ್ತಿಗಳು ಪೃಥ್ವಿ ಶಾ ಬಳಿ ಸೆಲ್ಫಿಗಾಗಿ ಒತ್ತಾಯಿಸಿದ್ದರು. ಬಳಿಕ ಗುಂಪಾಗಿ ಬಂದು ಸೆಲ್ಫಿಗಾಗಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಾರಿ ಶಾ ಸೆಲ್ಫಿಗೆ ನಿರಾಕರಿಸಿದರು. ಆದರೆ ಆ ಗುಂಪು ಒತ್ತಡ ಹೇರಿದಾಗ ಪೃಥ್ವಿ ಶಾ ಸ್ನೇಹಿತ ಹೋಟೆಲ್ನ ಮ್ಯಾನೇಜರ್ಗೆ ಕರೆಮಾಡಿ ದೂರು ನೀಡಿದ್ದಾರೆ. ಆರೋಪಿಗಳನ್ನು ಹೊಟೇಲ್ನಿಂದ ಹೊರಹೋಗುವಂತೆ ಮ್ಯಾನೇಜರ್ ಸೂಚಿಸಿದರು. ಇದರಿಂದ ಕೆರಳಿದ ಆರೋಪಿಗಳು ಪೃಥ್ವಿ ಶಾ ಮತ್ತು ಅವರ ಸ್ನೇಹಿತ ರಾತ್ರಿ ಊಟ ಮುಗಿಸಿ ಹೋಟೆಲ್ನಿಂದ ಹೊರಗೆ ಬಂದಾಗ ಕೆಲವರು ಬೇಸ್ಬಾಲ್ ಬ್ಯಾಟ್ಗಳೊಂದಿಗೆ ಹೋಟೆಲ್ನ ಹೊರಗೆ ನಿಂತಿದ್ದರು. ಬಳಿಕ ಆರೋಪಿಗಳು ಬೇಸ್ಬಾಲ್ ಬ್ಯಾಟ್ಗಳಿಂದ ಬಳಸಿ ಪೃಥ್ವಿ ಶಾ ಸ್ನೇಹಿತನ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜುಗಳನ್ನು ಒಡೆದು ಹಾಕಿದ್ದು ಕಾರಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ.