
ನವದೆಹಲಿ, ಆಗಸ್ಟ್ 20: ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳ ವೇಳೆ ನೀಡಲಾಗುವ ಬಹುಮಾನದ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಕ್ರೀಡಾ ಸಚಿವಾಲಯ ಯೋಚಿಸುತ್ತಿದೆ. ಈ ಪ್ರಾಸ್ತಾವನೆಗೆ ಅನುಮೋದನೆ ಸಿಕ್ಕರೆ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳ ಬಹುಮಾನದ ಮೊತ್ತದಲ್ಲಿ ಗಣನೀಯ ಏರಿಕೆಯಾಗಲಿದೆ (ಚಿತ್ರದಲ್ಲಿ: ಈ ವರ್ಷದ ಖೇಲ್ ರತ್ನಕ್ಕೆ ಶಿಫಾರಸಾಗಿರುವ ಕ್ರಿಕೆಟರ್ ರೋಹಿತ್ ಶರ್ಮಾ).
ಬಹುಮಾನದ ಮೊತ್ತವನ್ನು ಹೆಚ್ಚಿಸುವ ಪ್ರಾಸ್ತಾವನೆಗೆ ಅನುಮೋದನೆ ದೊರೆತಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ 25 ಲಕ್ಷ ರೂ. ಮತ್ತು ಅರ್ಜುನ ಪ್ರಶಸ್ತಿಗೆ 15 ಲಕ್ಷ ರೂ. ನಗದು ಪುರಸ್ಕಾರ ಸಿಗಲಿದೆ. ಸದ್ಯ ಖೇಲ್ ರತ್ನಕ್ಕೆ 7.5 ಲಕ್ಷ ರೂ. ಮತ್ತು ಅರ್ಜುನಕ್ಕೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ.
ಹಾಕಿ ದಂತಕತೆ ಧ್ಯಾನ್ ಚಂದ್ ಜನ್ಮದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ಆಗಸ್ಟ್ 29ರಂದು ಭಾರತದಲ್ಲಿ ಕ್ರೀಡಾ ದಿನ ಆಚರಿಸಲಾಗುತ್ತದೆ. ಇದೇ ವೇಳೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಬಲ್ಲ ಮಾಹಿತಿಯ ಪ್ರಕಾರ, ಕ್ರೀಡಾ ದಿನಕ್ಕೂ ಮುನ್ನ ಪ್ರಾಸ್ತಾವನೆಗೆ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಸಚಿವಾಲಯ ಕಾರ್ಯ ನಿತರವಾಗಿದೆ.
'ರಾಷ್ಟ್ರೀಯ ಕ್ರೀಡಾ ಪುರಸ್ಕಾರಗಳ ಬಹುಮಾನದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸಿದ್ದತೆಗಳು ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಪುರಸ್ಕಾರಗಳ ಬಹುಮಾನದ ಮೊತ್ತ ಕಡಿಮೆಯಿದೆ ಎಂದು ಕ್ರೀಡಾಪಟುಗಳು ದೂರಿತ್ತಿರುವುದರಿಂದ ಸಚಿವರು ಇದಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದೆ,' ಎಂದು ಕ್ರೀಡಾ ಸಚಿವಾಲಯ ಪಿಟಿಐಗೆ ತಿಳಿಸಿದೆ.