
ಮುಂಬೈ ನವೆಂಬರ್ 16: ಮುಂಬೈಯಲ್ಲಿ ನಡೆದ ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಚೆನ್ನೈ ತಂಡ ಪಾರಮ್ಯ ಮೆರೆದಿದೆ. ಅಂತಿಮ ದಿನವಾದ ಶುಕ್ರವಾರ (ನವೆಂಬರ್ 16) ಚೆನ್ನೈ ವಿದ್ಯಾರ್ಥಿಗಳು 6 ಚಿನ್ನ, 5 ಬೆಳ್ಳಿ, 4 ಕಂಚಿನ ಪದಕ ಗೆದ್ದರು. ಒಟ್ಟಾರೆ 23 ಬಂಗಾರ, 23 ಬೆಳ್ಳಿ ಮತ್ತು 14 ಕಂಚು ಜಯಿಸಿದ ಚೆನ್ನೈ ಸಮಗ್ರ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬೆಂಗಳೂರು ತಂಡ ರನ್ನರ್ಸ್ ಎನಿಸಿತು. ಬೆಂಗಳೂರಿನ ವಿದ್ಯಾರ್ಥಿಗಳು ಒಟ್ಟು 12 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನ ಪದಕಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿದ್ದಾರೆ. 8 ಚಿನ್ನ, 15 ಬೆಳ್ಳಿ ಹಾಗೂ 9 ಕಂಚಿನ ಪದಕ ಗೆದ್ದ ಕೋಲ್ಕತ್ತಾ ಮೂರನೇ ಸ್ಥಾನ ತನ್ನದಾಗಿಸಿಕೊಂಡಿದೆ.
ಅಂತಿಮ ದಿನದಲ್ಲಿ ಚೆನ್ನೈ ಪರ ಶಿವಾನಿ ಪಿ (ವನವಾಣಿ ಹೈಯರ್ ಸೆಕೆಂಡರಿ ಸ್ಕೂಲ್) ಹಿರಿಯ ವಿದ್ಯಾರ್ಥಿನಿಯರ 200 ಮೀ. ಓಟ, ಪವಿತ್ರಾ ಪಿ (ಅಲಪಪ್ಪಾ ಸ್ಕೂಲ್, ಪುರುಷವಾಲ್ಕಂ) ಜೂನಿಯರ್ ಬಾಲಕಿಯರ 800 ಮೀ. ಓಟ, ಸತೀಶ್ ಕುಮಾರ್ (ಕಾರ್ಪೊರೇಷನ್ ಹೈಸ್ಕೂಲ್ ರತಿನಪುರಿ) ಪ್ರಶಸ್ತಿ ಜಯಸಿದ್ದಾರೆ.
ಹಿರಿಯ ಬಾಲಕರ 1500 ಮೀ. ಓಟದಲ್ಲಿ ಸ್ವಾಮಿನಾಥನ್ ಆರ್. (ಲೊಯಲಾ ಕಾಲೇಜು), ಹರ್ಷಿಣಿ ಸರವಣನ್ (ಎಂಒಪಿ, ವೈಷ್ಣವ್ ಮಹಿಳಾ ಕಾಲೇಜು) ಕಾಲೇಜು ವಿಭಾಗದ ಬಾಲಕ ಹಾಗೂ ಬಾಲಕಿಯರ ವಿಭಾಗದ ಲಾಂಗ್ಜಂಪ್ನಲ್ಲಿ ಚಿನ್ನ ಗೆದ್ದಿದ್ದಾರೆ.