ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಮತ್ತು ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಶುಕ್ರವಾರ, ನವೆಂಬರ್ 3ರಂದು ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ಇಬ್ಬರೂ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ. ಆದರೆ, ಗಾಯದ ಸಮಸ್ಯೆಯಿಂದ ಸದ್ಯ ಭಾರತದಲ್ಲೇ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಮತ್ತು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ.

2023ರ ಏಕದಿನ ವಿಶ್ವಕಪ್ನ ಭಾರತದ ಪ್ರಾಥಮಿಕ ತಂಡದಲ್ಲಿ ಹೆಸರಿಸಲ್ಪಟ್ಟ ನಂತರವೂ ಅಕ್ಷರ್ ಪಟೇಲ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಯಿತು.
2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತ ತಂಡದ ಸೂಪರ್ 4 ಪಂದ್ಯದ ವೇಳೆ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಭುಜದ ಗಾಯಕ್ಕೆ ಒಳಗಾದರು.
ಇನ್ನು ಎಡಗೈ ಬ್ಯಾಟರ್ ರಿಷಭ್ ಪಂತ್ 2022ರ ಡಿಸೆಂಬರ್ 30ರಂದು ನಡೆದ ದುರಂತ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಇದು ಅವರ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆ ತಂದಿತು. ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಬದಿಯಲ್ಲಿ ಹೋಗಿ ಬಿದ್ದಿತ್ತು ಮತ್ತು ಬೆಂಕಿಗಾಹುತಿಯಾಗಿತ್ತು.

ಈ ವೇಳೆ ಸ್ವತಃ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ತಮ್ಮ ದೇಹದ ಭಾಗಗಳಿಗೆ ಗಾಯ ಅನುಭವಿಸಿದರು. ಬಲ ಮೊಣಕಾಲಿನ ಗಾಯವು ಅಸ್ಥಿರಜ್ಜು ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಒಳಗೊಂಡಿತ್ತು.
ಅಪಘಾತ ಸಂಭವಿಸಿ 10 ತಿಂಗಳಿಗೂ ಹೆಚ್ಚು ಕಾಲ ಕಳೆದಿರುವುದರಿಂದ ರಿಷಭ್ ಪಂತ್ ಪುನರ್ವಸತಿ ಹಾದಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.
ಕಳೆದ ತಿಂಗಳು ಅಕ್ಟೋಬರ್ 3ರಂದು ರಿಷಭ್ ಪಂತ್ ಅವರು ಬದರಿನಾಥ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಂದು ಬೆಳಗ್ಗೆ 11.30ಕ್ಕೆ ಹೆಲಿಕಾಪ್ಟರ್ನಲ್ಲಿ ಹಿಮಾಲಯ ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು, ಸ್ಥಳೀಯ ಯುವಕರು, ಕ್ರಿಕೆಟ್ ಪ್ರೇಮಿಗಳು ಮತ್ತು ಯಾತ್ರಾರ್ಥಿಗಳು ಸ್ವಾಗತಿಸಿದರು.

ಖಾನಪುರ ಶಾಸಕ ಉಮೇಶ್ ಕುಮಾರ್ ಪಂತ್ ಜೊತೆಗಿದ್ದರು ಎಂದು ಪಿಟಿಐ ವರದಿ ಮಾಡಿದೆ. ವಿಷ್ಣುವಿನ ದರ್ಶನದ ನಂತರ ರಿಷಭ್ ಪಂತ್ ಅವರು ಬದರಿನಾಥ ದೇವಾಲಯದ ಸಂಕೀರ್ಣದಲ್ಲಿರುವ ಇತರ ದೇವಾಲಯಗಳಿಗೆ ಪೂಜೆ ಸಲ್ಲಿಸಿದರು ಎಂದು ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ಹೇಳಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ರಾವಲ್ ಈಶ್ವರ ಪ್ರಸಾದ್ ನಂಬೂದರಿ ಅವರಿಂದ ಆಶೀರ್ವಾದ ಪಡೆದರು. ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವಾಗ, ದೂರದಿಂದಲೇ ಎಲ್ಲರಿಗೂ ನಮಸ್ಕರಿಸಿದ ಕ್ರಿಕೆಟಿಗನನ್ನು ನೋಡಲು ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಮುಗಿಬಿದ್ದರು.
ರಿಷಭ್ ಪಂತ್ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಗಂಗೊಳ್ಳಿಹತ್ನ ಮೂಲದವರು. ಆದರೆ ಅವರ ಕುಟುಂಬ ಇದೀಗ ರೂರ್ಕಿಯಲ್ಲಿ ವಾಸಿಸುತ್ತಿದೆ.