ನವದೆಹಲಿ, ಮೇ 17 : ಜೂನ್ 10 ರಿಂದ ಜೂನ್ 17 ರವರೆಗೆ ಲಂಡನ್ ನಲ್ಲಿ ನಡೆಯಲಿರುವ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಭಾರತ ಪುರುಷರ ಹಾಕಿ ತಂಡ ಪ್ರಕಟವಾಗಿದೆ. ನಾಯಕ ಸರ್ದಾರ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ತಂಡವನ್ನು ಮುನ್ನಡೆಸಲಿದ್ದಾರೆ.
ಮುಂಬರುವ ರಿಯೋ ಒಲಿಂಪಿಕ್ಸ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕಳೆದ ಅಝ್ಲಾನ್ ಷಾ ಟೂರ್ನಿಯಲ್ಲಿ ಸರ್ದಾರ್ ಸಿಂಗ್ ಆಡಿದ್ದರು. ಆದರೆ, ಶ್ರೀಜೇಶ್ ಗೆ ವಿಶ್ರಾಂತಿ ನೀಡಲಾಗಿತ್ತು.[ಅರ್ಜುನ ಪ್ರಶಸ್ತಿಗೆ ಕನ್ನಡಿಗ ರಘುನಾಥ್ ಹೆಸರು ಶಿಫಾರಸು]
ಎಫ್ಐಎಚ್ ಟೂರ್ನಿಗೆ ಸರ್ದಾರ್ ಸಿಂಗ್ ಅವರಿಗೆ ಕೋಕ್ ನೀಡಿದ್ದು, ಶ್ರೀಜೇಶ್ ಅವರಿಗೆ ತಂಡವನ್ನು ಮನ್ನಡೆಸಲು ಚಾನ್ಸ್ ನೀಡಲಾಗಿದೆ ಹಾಗೂ ಕನ್ನಡಿಗ ಎಸ್.ವಿ ಸುನೀಲ್ ಅವರಿಗೆ ತಂಡದ ಉಪನಾಯಕನ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಭಾರತ ಹಾಕಿ ತಂಡದ ಅಧ್ಯಕ್ಷ ನರೇಂದ್ರ ಬಾತ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕನ್ನಡಿಗ ವಿ ಆರ್ ರಘುನಾಥ್, ಕೋಥಾಜಿ ಸಿಂಗ್, ಕನ್ನಡಿಗ ಎಸ್.ಕೆ ಉತ್ತಪ್ಪ, ಆಕಾಶ್ ದೀಪ್ ಸಿಂಗ್, ತಂಡದಲ್ಲಿ ಸ್ಥಾನ ಪಡೆದುಕೊಂಡ ಹೊಸ ಮುಖಗಳಾಗಿವೆ. ಭಾರತ ಜೂನಿಯರ್ ಹಾಕಿ ತಂಡದ ಆಟಗಾರರಾದ ಹರ್ಜಿತ್ ಸಿಂಗ್, ಗೋಲ್ ಕೀಪರ್ ವಿಕಾಸ್ ದಾಹಿಯಾ ಅವರಿಗೆ ತಂಡದಲ್ಲಿ ಆಡಲು ಅವಕಾಶ ನೀಡಲಾಗಿದೆ.[ಕೊಡಗಿನಲ್ಲಿ ಹಾಕಿ, ಡಿಫೆನ್ಸ್ ಅಕಾಡೆಮಿ ಸ್ಥಾಪನೆ?]
ಡಿಫೆಂಡರ್ ಹರ್ಮನ್ ಪ್ರೀತ್ ಸಿಂಗ್ ಅವರ ಅಮೋಘ ಪ್ರದರ್ಶನದಿಂದ ಅಝ್ಲಾನ್ ಷಾ ಟೂರ್ನಿಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿರುವುದನ್ನು ಸ್ಮರಿಸಬಹುದು.
ಭಾರತ ಹಾಕಿ ತಂಡ : ಪಿ.ಆರ್ ಶ್ರೀಜೇಶ್(ನಾಯಕ), ಎಸ್.ವಿ ಸುನೀಲ್(ಉಪನಾಯಕ), ವಿಕಾಸ್ ದಾಹಿಯಾ, ಪ್ರದೀಪ್ ಮೋರ್, ವಿ.ಆರ್ ರಘುನಾಥ್, ಕೋಥಾಜಿತ್ ಸಿಂಗ್, ಸುರೇಂದ್ರ ಕುಮಾರ್, ಹರ್ಮನ್ ಪ್ರೀತ್ ಸಿಂಗ್, ದಸೀಶ್ ಮುಜ್ತಬಾ, ಚೆಂಗ್ಲೆನ್ ಸನಾ ಸಿಂಗ್, ಮನ್ಪ್ರೀತ್ ಸಿಂಗ್, ಎಸ್.ಕೆ ಉತ್ತಪ್ಪ, ದೇವಿಂದರ್ ವಾಲ್ಮೀಕಿ, ಹರ್ಜಿತ್ ಸಿಂಗ್, ತಲ್ವಿಂದರ್ ಸಿಂಗ್, ಮನ್ ದೀಪ್ ಸಿಂಗ್, ಆಕಾಶ್ ದೀಪ್ ಸಿಂಗ್, ನಿಕಿನ್ ತಿಮ್ಮಯ್ಯ.