ಇಂಚಿಯಾನ್(ದಕ್ಷಿಣ ಕೊರಿಯಾ), ಅ.2: ಏಷ್ಯನ್ ಗೇಮ್ಸ್ ಮಹಿಳೆಯರ ಬಾಕ್ಸಿಂಗ್ ನಲ್ಲಿ ರೆಫ್ರಿ ತಪ್ಪು ನಿರ್ಣಯದಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಭಾರತದ ಸರಿತಾದೇವಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ ಘಟನೆ ಈಗ ಎಲ್ಲರ ಗಮನ ಸೆಳೆದಿದೆ. ಸರಿತಾ ಪರ-ವಿರೋಧಿ ಪ್ರತಿಕ್ರಿಯೆಗಳು ಕೇಳಿ ಬಂದಿವೆ.
ಲೈಟ್ ವೈಟ್ ವಿಭಾಗದ ಸ್ಪರ್ಧೆ ಮುಗಿದ ಬಳಿಕ ಪದಕ ಪ್ರದಾನ ಸಂದರ್ಭದಲ್ಲಿ ಹಾಜರಿದ್ದ ಸರಿತಾದೇವಿ ಕಂಚಿನ ಪದಕ ನೀಡುವಾಗ ಕಣ್ಣೀರಿಟ್ಟು ಸೆಮಿಫೈನಲ್ ನಲ್ಲಿ ನನಗೆ ಅಂಕ ನೀಡುವಾಗ ಅನ್ಯಾಯ ಮಾಡಲಾಗಿದೆ ಎಂದು ದೂರಿದರು. ಈಗಾಗಲೇ ಭಾರತೀಯ ಬಾಕ್ಸಿಂಗ್ ಫೆಡರೇಷನ್ ತೀರ್ಪುಗಾರರ ನಿರ್ಣಯ ಪ್ರಶ್ನಿಸಿ 500 ಡಾಲರ್ ಗಳನ್ನು ಪಾವತಿಸಿ ದೂರು ದಾಖಲಿಸಿತ್ತು. ಆದರೆ ಏಷ್ಯಾ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ಈ ಪ್ರಕರಣ ಮುಗಿದ ಅಧ್ಯಾಯ ಎಂದು ತೀರ್ಪು ನೀಡಿತ್ತು.

ಈಗ ಈ ಪ್ರಕರಣ ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾ ಮುಂದೆ ಬಂದಿದೆ. ಪದಕವನ್ನು ಕೊರಳಿಗೆ ಹಾಕಿಕೊಳ್ಳದೆ ನಿರಾಕರಿಸಿ ಕೈಯಲ್ಲಿ ಸ್ವೀಕರಿಸಿದ ಸರಿತಾ ನಂತರ ಅದನ್ನು ಬೆಳ್ಳಿ ಪದಕ ಗೆದ್ದ ಪಾರ್ಕ್ ಅವರ ಕೊರಳಿಗೆ ಹಾಕಿದ್ದರು. ಈ ರೀತಿ ಕ್ರೀಡಾಸ್ಪೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಸರಿತಾ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು? ಆಕೆಯ ಮೇಲೆ ನಿಷೇಧ ಹೇರಬೇಕೆ? ಎಂಬುದರ ಬಗ್ಗೆ ಐಒಎ ನಿರ್ಣಯ ಕೈಗೊಳ್ಳಲಿದೆ.
ಈ ಮಧ್ಯೆ ಸರಿತಾ ಪರ ಭಾರಿ ಬೆಂಬಲ ವ್ಯಕ್ತವಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಸರಿತಾಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತಿದ್ದಾರೆ.
ಈ ಹಿಂದೆ ಕೂಡಾ ಇದೇ ರೀತಿ ಪ್ರದರ್ಶನ ನಡೆದಿತ್ತು. ಎಲ್ ದೇವೇಂದ್ರ ಸಿಂಗ್(49 ಕೆಜಿ) ಅವರು ದಕ್ಷಿಣ ಕೊರಿಯಾದ ಬಾಕ್ಸರ್ ವಿರುದ್ಧ ಸೋಲೊಪ್ಪಿಕೊಳ್ಳಲು ಸಿದ್ಧರಾಗದೆ ಪ್ರತಿಭಟಿಸಿದ್ದರು. ಮಂಗೋಲಿಯಾ ಬಾಕ್ಸರ್ ರೊಬ್ಬರು ಕೊರಿಯಾದ ಸ್ಪರ್ಧಿ ವಿರುದ್ಧ ಪ್ರತಿಭಟಿಸಿದ್ದರು.