
ಸಿಂಗಾಪುರ್ ಸ್ಮ್ಯಾಶ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ. ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ತಮ್ಮ ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಹೀಗಾಗಿ ಭಾರತದ ಹೋರಾಟ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಕೊನೆಗೊಂಡಿದೆ.
ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಮನಿಕಾ ಮತ್ತು ಸತ್ಯನ್ ಜ್ಞಾನಶೇಖರನ್ ಜೋಡಿ ಜಪಾನ್ನ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಜೋಡಿಯಾದ ಹಿನಾ ಹಯಾಟಾ ಮತ್ತು ಟೊಮೊಕಾಜು ಹರಿಮೊಟೊ ಸೆಣೆಸಾಡಿದ್ದರು. ಈ ಪಂದ್ಯದಲ್ಲಿ ಪೈಪೋಟಿಯ ಪ್ರದರ್ಶನ ನೀಡಿದರೂ ಬಳಿಕ ಸೋಲಿನೊಂದಿಗೆ ಹೋರಾಟ ಅಂತ್ಯವಾಗಿದೆ.
52 ನಿಮಿಷಗಳ ಕಾಲ ನಡೆದ ಈ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಹಂತದ ಕಠಿಣ ಹೋರಾಟದ ಪಂದ್ಯದಲ್ಲಿ ಮಣಿಕಾ-ಸತ್ಯನ್ 2-3 (9-11 9-11 11-8 11-5 7-11) ಅಂತರದಿಂದ ಸೋಲಿ ಕಂಡಿದ್ದಾರೆ. ಭಾರತದ ಜೋಡಿ ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದುಕೊಂಡಿತ್ತು.
ಇದಕ್ಕೂ ಮೊದಲು ಮಣಿಕಾ ಮತ್ತು ಸತ್ಯನ್ ಅವರು 16ರ ಘಟ್ಟದ ಹೋರಾಟದಲ್ಲಿ ಸಿಂಗಾಪುರದ ಜಿಯಾನ್ ಜೆಂಗ್ ಮತ್ತು ಚೆವ್ ಜೆ ಯು ಕ್ಲಾರೆನ್ಸ್ ಜೋಡಿಯ ವಿರುದ್ಧ ಸೆಣೆಸಾಡಿ ಗೆಲುವು ಸಾಧಿಸಿದ್ದರು. ಸಿಂಗಾಪುರದ ಜೋಡಿಯ ವಿರುದ್ಧ ಭಾರತದ ಆಟಗಾರರು 3-1 (11-7, 12-10, 9-11, 11-3) ಅಂತರದಿಂದ ಗೆಲುವು ಕಂಡಿದ್ದರು.
ಇನ್ನು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮನಿಕಾ ಭಾತ್ರಾಗೆ ಅರ್ಚನಾ ಕಾಮತ್ ಸಾಥ್ ನೀಡಿದ್ದರು. ಈ ಜೋಡಿ ಚೀನಾದ ಮೆಂಗ್ ಚೆನ್ ಮತ್ತು ಯಿಡಿ ವಾಂಗ್ ವಿರುದ್ಧ ಕಠಿಣ ಪೈಪೋಟಿ ನೀಡಿ ಸೋಲು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಭಾರತದ ಜೋಡಿ 2-3 (2-11 6-11 15-13 12-10 6-11) 42 ಅಂತರದಿಂದ ಸೋಲು ಕಂಡಿದ್ದಾರೆ.
ಇನ್ನು ಮುನ್ನ ಮನಿಕಾ, ಸತ್ಯನ್ ಮತ್ತು ಶರತ್ ಕಮಲ್ ಮೊದಲ ಸುತ್ತಿನಲ್ಲಿ ತಮ್ಮ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಸೋಲು ಕಂಡಿದ್ದರು. ಮತ್ತೊಂದೆಡೆ ಪುರುಷರ ಡಬಲ್ಸ್ನಲ್ಲಿ ಹರ್ಮೀತ್ ದೇಸಾಯಿ ಮತ್ತು ಮಾನವ್ ಠಕ್ಕರ್ ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.