
ಭಾರತೀಯ ಸಿನಿಮಾ ರಂಗದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ. ಕೊರೊನಾವೈರಸ್ಗೆ ತುತ್ತಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್ ಭಾನುವಾರ ಅಗಲಿದ್ದಾರೆ. ಸಿನಿಮಾ ರಂಗ ಕಂಡ ಶ್ರೇಷ್ಠ ಗಾಯಕಿಯ ಅಗಲಿಕೆಗೆ ದೇಶದ ಸಂಗೀತ ಪ್ರೇಮಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕ್ರಿಕೆಟ್ ಲೋಕದ ದಿಗ್ಗಜರು ಕೂಡ ಶ್ರೇಷ್ಠ ಗಾಯಕಿಯ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಲತಾಜಿ ಅವರ ಅಗಲಿಕೆ ತೀವ್ರ ಬೇಸರವನ್ನುಂಟು ಮಾಡಿದೆ. ಅವರ ಮಧುರ ಧ್ವನಿ ವಿಶ್ವಾದ್ಯಂತ ಕೋಟ್ಯಂತರ ಜನರನ್ನು ತಲುಪಿದೆ. ನಿಮ್ಮ ಎಲ್ಲಾ ಸಂಗೀತಕ್ಕೆ ಹಾಗೂ ನೆನಪುಗಳಿಗೆ ಧನ್ಯವಾದಗಳು. ಅವರ ಕುಟುಂಬ ವರ್ಗಕ್ಕೆ ಹಾಗೂ ಆಪ್ತರಿಗೆ ನನ್ನ ಸಂತಾಪಗಳು" ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ.
ಇನ್ನು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಲತಾ ಮಂಗೇಶ್ಕರ್ ಅಗಲಿಕೆಗೆ ನೋವನ್ನು ವ್ಯಕ್ತಪಡಿಸಿದ್ದಾರೆ. "ಭಾರತ ರತ್ನ ಲತಾ ಮಂಗೇಶ್ಕರ್ ಅವರ ಅಗಲಿಕೆಯ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ಅವರ ಧ್ವನಿ ಹಾಗೂ ಮಾಧುರ್ಯ ಸದಾ ಅಮರವಾಗಿರುತ್ತದೆ. ಅವರ ಕುಟುಂಬಕ್ಕೆ ಮತ್ತು ಗೆಳೆಯರಿಗೆ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟ್ಟರ್ನಲ್ಲಿ ಲತಾ ಮಂಗೇಶ್ಕರ್ ಸಾವಿನ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. "ಭಾರತದ ಗಾನ ಕೋಗಿಲೆ, ಜಗತ್ತಿನ ಕೋಟ್ಯಂತರ ಜೀವಗಳಿಗೆ ಸಂತೋಷವನ್ನು ನೀಡಿದ ಧ್ವನಿ ಲತಾ ಮಂಗೇಶ್ಕರ್ ಅವರದ್ದು. ಅವರ ಅಗಲಿಗೆ ತೀವ್ರ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಹೃದಯಾಂತರಾಳದ ಸಂತಾಪಗಳು" ಎಂದು ಸೆಹ್ವಾಗ್ ಟ್ವಿಟ್ ಮಾಡಿದ್ದಾರೆ.
ಇನ್ನು ಭಾರತದ ಅನುಭವಿ ಆಟಗಾರ ಶಿಖರ್ ಧವನ್ ಕೂಡ ಟ್ವೀಟ್ನಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. "ನಿಮ್ಮ ಸಂಗೀತ ನಮ್ಮ ಹೃದಯವನ್ನು ತಟ್ಟಿದೆ ಹಾಗೂ ನಮ್ಮಲ್ಲಿ ನಗುವರಳಲು ಕಾರಣವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಶ್ರೇಷ್ಠ ಪರಂಪರೆ ಮುಂದಿನ ತಲೆಮಾರುಗಳಿಗೆ ಸ್ಪೂರ್ತಿಯಾಗಲಿದೆ" ಎಂದು ಧವನ್ ಟ್ವೀಟ್ ಮಾಡಿದ್ದಾರೆ.