
ಭಾರತೀಯ ಶೂಟರ್ ಮನು ಭಾಕರ್ಗೆ ದಿಲ್ಲಿ ಏರ್ಪೋರ್ಟ್ನಲ್ಲಿ ವಿಮಾನವೇರಲು ಏರ್ಇಂಡಿಯಾ ಸಿಬ್ಬಂದಿಗಳು ಅನುಮತಿ ನಿರಾಕರಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಟ್ವೀಟ್ಟರ್ನಲ್ಲಿ ಈ ಬಗ್ಗೆ ಮನು ಭಾಕರ್ ಆರೋಪವನ್ನು ಮಾಡಿದ್ದು ನನ್ನ ಬಳಿ ಅಗತ್ಯವಿರುವ ಎಲ್ಲಾ ದಾಖಲೆಗಳು ಇದ್ದರೂ ಪ್ರಯಾಣಕ್ಕಾಗಿ ನನ್ನ ಬಳಿ 10,200 ರೂಪಾಯಿ ಲಂಚವನ್ನು ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಬಳಿ ಎರಡು ಗನ್ಗಳು ಹಾಗೂ ಮದ್ದು ಗುಂಡುಗಳು ಇವೆ ಎನ್ನುವ ಕಾರಣಕ್ಕೆ ಏರ್ಇಂಡಿಯಾ ಅಧಿಕಾರಿ ಮನೋಜ್ ಗುಪ್ತಾ ಹಾಗೂ ಸಿಬ್ಬಂದಿಗಳು ನನ್ನನ್ನು ಅವಮಾನಿಸುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಹಾಗೂ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಹಾಯವನ್ನು ಕೋರಿದ್ದರು. ಶೂಟಿಂಗ್ ತರಬೇತಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮನು ಭಾಕರ್ ದಿಲ್ಲಿಯಿಂದ ಭೋಪಾಲ್ಗೆ ತೆರಳಬೇಕಾಗಿತ್ತು.
ಈ ವಿಚಾರವಾಗಿ ಮನು ಭಾಕರ್ ಸಂಜೆ 8:17 ರಿಂದ 8: 57ರ ಮಧ್ಯೆ ಐದು ಟ್ವೀಟ್ಗಳನ್ನು ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮಧ್ಯ ಪ್ರವೇಶಿಸಿದ ನಂತರ ಮನು ಭಾಕರ್ಗೆ ವಿಮಾನವೆರಲು ಅನುಮತಿ ದೊರೆತಿದ್ದು ಬಳಿಕ ದಿಲ್ಲಿ ವಿಮಾನನಿಲ್ದಾಣದಿಂದ ಭೋಪಾಲ್ಗೆ ಪ್ರಯಾಣವನ್ನು ಬೆಳೆಸಿದರು.
ಬಳಿಕ ಟ್ವಿಟ್ ಮಾಡಿ ಕೇಂದ್ರ ಸಚಿವ ಕಿರಣ್ ರಿಜಿಜುಗೆ ಮನು ಭಾಕರ್ ಧನ್ಯವಾದವನ್ನು ತಿಳಿಸಿದ್ದಾರೆ. 'ನಿಮ್ಮೆಲ್ಲರ ಸಹಕಾರದಿಂದ ನನಗೆ ವಿಮಾನವೇರಲು ಅನುಮತಿ ದೊರೆತಿದೆ. ಧನ್ಯವಾದಗಳು ಇಂಡಿಯಾ' ಎಂದು ಮನು ಭಾಕರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ ನೀವು ನಮ್ಮ ದೇಶದ ಹೆಮ್ಮೆ ಎಂದು ರಿಟ್ವೀಟ್ ಮಾಡಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಏರ್ಇಂಡಿಯಾ ಪ್ರತಿಕ್ರಿಯೆಯನ್ನು ನೀಡಿದೆ. "ನಮ್ಮ ಸಿಬ್ಬಂದಿಗಳು ಅಗತ್ಯವಿರುವ ದಾಖಲೆಗಳನ್ನು ಮಾತ್ರವೇ ಕೇಳಿದ್ದಾರೆ. ಆ ದಾಖಲೆಗಳು ಇಲ್ಲದ ಕಾರಣ ಶಸ್ತ್ರಾಸ್ತ್ರಗಳಿಗಾಗಿ ಕಾನೂನು ಪ್ರಕಾರವೇ ವಿಧಿಸುವ ಶುಲ್ಕವನ್ನು ವಿಧಿಸಲಾಗಿತ್ತು. ಆರೋಪಿಸಿರುವಂತೆ ಲಂಚವನ್ನು ಕೇಳಲಾಗಿಲ್ಲ. ನಿಮ್ಮಿಂದ ಎಲ್ಲಾ ದಾಖಲೆಗಳು ದೊರೆತ ನಂತರ ನಿಮಗೆ ವಿಮಾನವೇರಲು ಅವಕಾಶವನ್ನು ನೀಡಲಾಗಿದೆ. ದೇಶದ ಹೆಮ್ಮೆಯ ಕ್ರೀಡಾಪಟುಗಳನ್ನು ಏರ್ಇಂಡಿಯಾ ಯಾವಾಗಲೂ ಪ್ರೋತ್ಸಾಹಿಸುತ್ತದೆ. ಹಲವು ಶ್ರೇಷ್ಠ ಕ್ರೀಡಾಪಟುಗಳು ನಮ್ಮೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದೆ.