
ನವದೆಹಲಿ, ಸೆಪ್ಟೆಂಬರ್ 17: ಈ ಸೀಸನ್ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರದೆ ಪರದಾಡಿದ್ದ ಭಾರತದ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ವರ್ಲ್ಡ್ ಚಾಂಪಿಯನ್ ಶಿಪ್ ಗಾಗಿ ಭಾರತದ ಕುಸ್ತಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅದೂ ಯಾವುದೇ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳದೆ ಅನ್ನುವುದು ವಿಶೇಷ.
ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ಗಾಗಿ ಅರ್ಹತೆ ಗಿಟ್ಟಿಸಿಕೊಳ್ಳಬೇಕಿದ್ದರೆ ಸಾಕ್ಷಿ ಅವರು ಸರಿತಾ ಮೋರ್ ಅವರೊಂದಿಗೆ ಟ್ರಯಲ್ಸ್ ನಲ್ಲಿ ಕಾದಾಡಬೇಕಿತ್ತು. ಮಹಿಳಾ ವಿಭಾಗದ 62 ಕೆಜಿ ಸ್ಪರ್ಧೆಯಲ್ಲಿ ಸಾಕ್ಷಿ ಜೊತೆ ಕಾದಾಡಲಿದ್ದ ಸರಿತಾ ಅವರು ಗಾಯದ ಕಾರಣ ಟ್ರಯಲ್ಸ್ ನಿಂದ ಹಿಂದೆ ಸರಿದರು. ಹೀಗಾಗಿ ಅದೃಷ್ಟ ಮಲ್ಲಿಕ್ ಗೆ ಒಲಿದಂತಾಗಿದೆ.
ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ 2018ರ ಋತು ಆರಂಭದಿಂದಲೂ ಫಾರ್ಮ್ ಇಲ್ಲದೆ ಪರದಾಡಿದ್ದರು. ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದ ಮಲ್ಲಿಕ್ ಗೆ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಪದಕವೇ ಲಭಿಸಿರಲಿಲ್ಲ.
ಚಾಂಪಿಯನ್ ಶಿಪ್ ಗಾಗಿ ಸಾಕ್ಷಿ ಮಲ್ಲಿಕ್ ಮತ್ತು ಸುಶೀಲ್ ಕುಮಾರ್ ಇಬ್ಬರೂ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳುವುದನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್ಐ) ಬಯಸಿತ್ತು. ಆದರೆ ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಸುಶೀಲ್ ಕೂಡ ಫಾರ್ಮ್ ಕಳೆದುಕೊಂಡಿರುವುದರಿಂದ ಟ್ರಯಲ್ಸ್ ನಿಂದ ದೂರ ಸರಿದಿದ್ದಾರೆ.