
ಲಕ್ನೋ, ಆಗಸ್ಟ್ 29: ಏಷ್ಯನ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತೆ ಸುಧಾ ಸಿಂಗ್ ಅವರ ಕನಸು ಕೊನೆಗೂ ನನಸಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಯತ್ನಿಸಿ ವಿಫಲರಾಗಿದ್ದ ಸುಧಾ ಅವರಿಗೆ ಈಗ ಉದ್ಯೋಗ ಅರಿಸಿಕೊಂಡು ಬಂದಿದೆ.
'ಸರ್ಕಾರದ ಘೋಷಣೆಯಿಂದ ನನಗೆ ಸಂತೋಷವಾಗಲಿ, ದುಃಖವಾಗಲಿ ಆಗಿಲ್ಲ. ನನ್ನ ಸಾಧನೆಗೆ ಎಂದೋ ಉದ್ಯೋಗ ಸಿಗಬೇಕಿತ್ತು. ಕ್ರೀಡಾ ಕೋಟಾದಡಿಯಲ್ಲಿ ಉದ್ಯೋಗಕ್ಕಾಗಿ 2014ರಲ್ಲೇ ಅರ್ಜಿ ಹಾಕಿದ್ದೆ. ತಡವಾಗಿಯಾದರೂ ಯುಪಿ ಸರ್ಕಾರಕ್ಕೆ ಸಾಧನೆ ಬಗ್ಗೆ ತಿಳಿದಿದ್ದು ಸಂತೋಷ' ಎಂದು ಸುಧಾ ಅವರು ಪಿಟಿಐ ಜತೆ ಮಾತನಾಡುತ್ತಾ ಹೇಳಿದರು.
32 ವರ್ಷ ವಯಸ್ಸಿನ ಸುಧಾ ಅವರು ಮಹಿಳೆಯರ 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದಾದ ಬಳಿಕ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೆಜೆಟೆಡ್ ಆಫೀಸರ್ ಸ್ತರ ಉದ್ಯೋಗದ ಭರವಸೆ ನೀಡಿದ್ದಾರೆ.
2010ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದಿದ್ದ ಸುಧಾ ಅವರು ಒಲಿಂಪಿಕ್ಸ್ ನಲ್ಲೂ ಸ್ಪರ್ಧಿಸಿದ್ದರು. ಏಷ್ಯನ್ ಹಾಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗಳಲ್ಲಿ ಪದಕ ಗೆದ್ದರೂ ಉದ್ಯೋಗ ಸಿಕ್ಕಿರಲಿಲ್ಲ. ಅರ್ಜುನ ಪ್ರಶಸ್ತಿ ಕೂಡಾ ಲಭಿಸಿದೆ.
ಕ್ರೀಡಾ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುವ ಇಚ್ಛೆ ಇದೆ. ಈ ಕುರಿತಂತೆ 2014ರಲ್ಲಿ ನಾನು ಹಾಕಿರುವ ಅರ್ಜಿ ಇನ್ನೂ ಮುಖ್ಯಮಂತ್ರಿಗಳ ಕಚೇರಿಯಲ್ಲಿರಬಹುದು. ಕ್ರೀಡಾ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ನನ್ನ ಗುರಿ ಎಂದರು.
ರಾಯ್ ಬರೇಲಿಯ ಸುಧಾ ಅವರಿಗೆ ಗೆಜೆಟೆಡ್ ಅಧಿಕಾರಿ ಸ್ಥಾನಮಾನ ಅಲ್ಲದೆ 30 ಲಕ್ಷ ನಗದು ಬಹುಮಾನ ಕೂಡಾ ಘೋಷಿಸಲಾಗಿದೆ. ಕಷ್ಟದ ದಿನಗಳಲ್ಲಿ ಕೈ ಹಿಡಿದಿದ್ದು ಭಾರತೀಯ ರೈಲ್ವೆ ಇಲಾಖೆ, 2015ರ ಸರ್ಕಾರಿ ಆದೇಶದಂತೆ ಏಷ್ಯನ್ ಅಥವಾ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ಸರ್ಕಾರಿ ಹುದ್ದೆ ನೀಡಬೇಕಾಗುತ್ತದೆ. ಆದರೆ, ಸುಧಾಗೆ ಅದೃಷ್ಟ ತಡವಾಗಿ ಕೂಡಿ ಬಂದಿದೆ. (ಪಿಟಿಐ)