ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ ಕನ್ನಡಿಗ ಸುಹಾಸ್ ಯತಿರಾಜ್ ಫೈನಲ್ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಸುಹಾಸ್ ತಮ್ಮ ಎರಡನೇ ಪ್ಯಾರಾಲಿಂಪಿಕ್ಸ್ನಲ್ಲಿ ಎರಡನೇ ಬೆಳ್ಳಿ ಪದಕ ಪಡೆದು ಬೀಗಿದ್ದಾರೆ.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸುಹಾಸ್ 9-21, 13-21 ರಿಂದ ಆತಿಥೇಯ ದೇಶದ ಲ್ಯೂಕಾಸ್ ಮಜೂರ್ ವಿರುದ್ಧ ಸೋಲು ಕಂಡರು. ಸುಹಾಸ್ ಯತಿರಾಜ್ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ಪದಕ ಪಕ್ಕಾ ಮಾಡಿಕೊಂಡಿದ್ದರು. ಆದರೆ ಪದಕದ ಬಣ್ಣದ ನಿರ್ಧಾರವಾಗಬೇಕಿತ್ತು.

ಮೊದಲ ಗೇಮ್ನಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಸುಹಾಸ್ ಅಂಕಗಳನ್ನು ಸುಲಭವಾಗಿ ನೀಡಿದರು. ಈ ವೇಳೆ ಎದುರಾಳಿ ಆಟಗಾರ ಗ್ಯಾಪ್ ಶಾಟ್ಗಳನ್ನು ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡರು. ಎರಡನೇ ಗೇಮ್ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವ ಕನಸನ್ನು ಸುಹಾಸ್ ಹೊಂದಿದ್ದರು. ಆದರೆ ಲ್ಯೂಕಾಸ್ ಮಜೂರ್ ಬಾಡಿ ಲೈನ್ ಶಾಟ್ಗಳನ್ನೇ ಹೆಚ್ಚಾಗಿ ಪ್ರಯೋಗಿಸಿ ಅಂಕಗಳನ್ನು ಬಾಚಿಕೊಂಡರು.
ಎರಡನೇ ಗೇಮ್ನಲ್ಲಿ ಜಿದ್ದಾಜಿದ್ದಿನ ಫೈಟ್ ಕಂಡು ಬಂದಿತ್ತು. ಆದರೆ ಈ ಫೈಟ್ ಮ್ಯಾಚ್ ಗೆಲ್ಲಲು ಸಾಕಾಗಲಿಲ್ಲ. ಪರಿಣಾಮ ಸುಹಾಸ್ ನಿರಾಸೆ ಅನುಭವಿಸಿದರು. ಅಲ್ಲದೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಸುಹಾಸ್, ಪ್ಯಾರಿಸ್ನಲ್ಲೂ ಇದೇ ಸಾಧನೆ ಮಾಡಿದರು. ಈ ಮೂಲಕ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಎರಡು ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದರು.
ಆರ್ಚರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ರಾಕೇಶ್ ಕುಮಾರ್, ಶೀತಲ್ ದೇವಿ 156-155 ರಿಂದ ಇಟಲಿಯ ಎಲಿಯೊನೊರಾ ಸರ್ಟಿ, ಮ್ಯಾಟಿಯೊ ಬೊನಾಸಿನಾ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಸಾಧಿಸಿದರು. ಈ ಪ್ಯಾರಾಲಿಂಪಿಕ್ಸ್ನಲ್ಲಿ ರಾಕೇಶ್ ಮತ್ತು ಶೀತಲ್ ಮೊದಲ ಪದಕ ಪಡೆದಿದ್ದಾರೆ. ಇಬ್ಬರೂ ತಮ್ಮ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವುದನ್ನು ತಪ್ಪಿಸಿಕೊಂಡರು. ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಇದುವರೆಗೆ 2 ಚಿನ್ನ, 5 ಬೆಳ್ಳಿ ಮತ್ತು 6 ಕಂಚು ಗೆದ್ದಿದೆ.
ಕಂಚಿನ ಪದಕದ ಹೋರಾಟದಲ್ಲಿ ಭಾರತೀಯ ಅಥ್ಲೀಟ್ಗಳು ಅಮೋಘ ಪ್ರದರ್ಶನ ನೀಡಿದರು. ಭಾರತ 38-40, 40-38, 38-39, 40-38, 156-155ರಿಂದ ಇಟಲಿಯ ಮಿಶ್ರ ತಂಡವನ್ನು ಮಣಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.