ಲಂಡನ್, ಆ. 12: ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗವಾಸ್ಕರ್ ಅವರ ಅದೃಷ್ಟ ಚೆನ್ನಾಗಿತ್ತು. ಮ್ಯಾಂಚೆಸ್ಟರ್ ಟೆಸ್ಟ್ ಮುಗಿಸಿಕೊಂಡು ಲಂಡನ್ ಗೆ ತೆರಳುವ ವೇಳೆ ಅಪಘಾತ ಸಂಭವಿಸಿದ್ದು, ಘಟನೆಯಿಂದ ಗವಾಸ್ಕರ್ ತೀವ್ರ ಆಘಾತ ಅನುಭವಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಮಂಗಳವಾರ ಸುದ್ದಿ ಪ್ರಸಾರ ಮಾಡಿವೆ.
ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಮುಗಿಸಿಕೊಂಡು ಮ್ಯಾಂಚೆಸ್ಟರ್ ನಿಂದ ಲಂಡನ್ನಿಗೆ ಜಗ್ವಾರ್ ಕಾರಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಓಲ್ಡ್ ಟ್ರಾಫೊರ್ಡ್ ನಿಂದ ಹೊರಟ ಕಾರು ಭಾರಿ ಮಳೆಗೆ ಸಿಲುಕಿ ನಿಯಂತ್ರಣ ಕಳೆದುಕೊಂಡಿತ್ತು. ಎದುರಿಗೆ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವಷ್ಟರಲ್ಲಿ ಗವಾಸ್ಕರ್ ಕಾರಿನ ಚಾಲಕ ತ್ವರಿತವಾಗಿ ಬಲಕ್ಕೆ ಕಾರನ್ನು ತಿರುಗಿಸಿ ಅಪಾಯವನ್ನು ತಪ್ಪಿಸಿದ ಎನ್ನಲಾಗಿದೆ.
ಸುನಿಲ್ ಗವಾಸ್ಕರ್ ಅವರು ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದರು ಅವರ ಜೊತೆಗೆ ಲಂಡನ್ ಮೂಲದ ಸ್ನೇಹಿತ ಚಂದ್ರೇಶ್ ಪಟೇಲ್ ಹಾಗೂ ಮತ್ತೊಬ್ಬ ವೀಕ್ಷಕವಿವರಣೆಗಾರ ಮಾರ್ಕ್ ನಿಕೋಲಾಸ್ ಕೂಡ ಇದ್ದರು ಎಂದು ತಿಳಿದು ಬಂದಿದೆ. ಗವಾಸ್ಕರ್ ಅವರಿದ್ದ ಕಾರಿನ ಬದಿಗೆ ಮತ್ತೊಂದು ಕಾರು ಗುದ್ದಿದೆ. ಅದರೆ, ಸಣ್ಣ ಪುಟ್ಟ ಗಾಯಗಳೊಂದಿಗೆ ಗವಾಸ್ಕರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಈ ಭೀಕರ ಘಟನೆ ನೆನೆದರೆ ಮೈ ಜುಂ ಎನ್ನುತ್ತದೆ. ಇಂಥಾ ಮಳೆ ಎಂದೂ ಎದುರಿಸಿಲ್ಲ. ನಮ್ಮ ಕಾರು ವೇಗವಾಗಿ ಚಲಿಸುತ್ತಿತ್ತು. ಪುಣ್ಯಕ್ಕೆ ಯಾರಿಗೂ ಏನು ಆಗಲಿಲ್ಲ. ಅದರೆ, ಈ ಘಟನೆಯಿಂದ ನಾನಂತೂ ಬೆಚ್ಚಿದೆ' ಎಂದು ಘಟನೆ ನಂತರ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಈ ಅಪಘಾತದ ನಂತರ ಕಾರನ್ನು ಅಲ್ಲೇ ಬಿಟ್ಟು ಕಾರಿನಲ್ಲಿದ್ದ ಎಲ್ಲರೂ ರೈಲು ಹತ್ತಿ ಲಂಡನ್ನಿಗೆ ಪ್ರಯಾಣ ಬೆಳೆಸಿದರು ಎಂದು ತಿಳಿದು ಬಂದಿದೆ.