
ಚಂಢೀಗಡ: ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾನೂನಿನ ವಿರುದ್ಧ ದೊಡ್ಡ ಮಟ್ಟಿನಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ. ರೈತರ ಪ್ರತಿಭಟನೆಗೆ ಭಾರತೀಯ ಬಹುತೇಕ ಸ್ಟಾರ್ ಕ್ರೀಡಾಪಟುಗಳು ಬೆಂಬಲ ಸೂಚಿಸುತ್ತಿದ್ದಾರೆ. ರಸ್ಲರ್ ವಿನೇಶ್ ಫೋಗಟ್ ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ವಿನೇಶ್ ಫೋಗಟ್, ರೈತರ ಅವಿತರ ಶ್ರಮಕ್ಕೆ ಗೌರವಿಸಿ ಎಂದು ಕೋರಿಕೊಂಡಿದ್ದಾರೆ. ಟ್ವಿಟರ್ ಮೂಲಕ ವಿನೇಶ್ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿ ಗೆದ್ದಿರುವ ವಿನೇಶ್, 'ಮಾತನಾಡಿ ದಣಿದಿದ್ದೇನೆ. ಈಗ ನನಗೆ ಪರಿಹಾರ ಬೇಕು. ಯಾರ ಹಕ್ಕನ್ನೂ ನಾನು ಬಯಸುತ್ತಿಲ್ಲ. ಆದರೆ ನನ್ನ ಶ್ರಮವನ್ನು ಗೌರವಿಸುವುದನ್ನು ಬಯಸಿದ್ದೇನೆ,' ಎಂದು ಹಿಂದಿಯಲ್ಲಿ ವಿನೇಶ್ ಬರೆದಿದ್ದಾರೆ, ಜೊತೆಗೆ Farmersprotest ಹ್ಯಾಷ್ಟ್ಯಾಗ್ ಸೇರಿಸಿದ್ದಾರೆ.
ರೈತ ವಿರೋಧಿ ಕಾನೂನು ಎನ್ನಲಾಗುತ್ತಿರುವ ಕೇಂದ್ರದ ಕೃಷಿ ಕಾನೂನಿನ ವಿರುದ್ಧ ಭಾರತದ ರೈತರು ಮಾಡುತ್ತಿರುವ ಬೃಹತ್ ಪ್ರತಿಭಟನೆಗೆ ವಿದೇಶಗಳಲ್ಲಿ ಬೆಂಬಲ ವ್ಯಕ್ತವಾಗುತ್ತದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೇರಿದಂತೆ ಇನ್ನಿತರ ದೇಶಗಳ ಪ್ರಮುಖರೂ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಪ್ರತಿಭಟನಾರ್ಥವಾಗಿ ಪ್ರತಿಷ್ಠಿತ ಪ್ರಶಸ್ತಿ ವಾಪಸ್ ನೀಡುವುದಾಗಿ ಹೇಳಿದ್ದಾರೆ.