
ಕಳೆದ ವರ್ಷ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ನ್ನು ಕೊರೊನಾ ವೈರಸ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟು ಈ ವರ್ಷ ಯಾವುದೇ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆಸಲಾಗಿದೆ. ಹಾಗೂ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಮೂಲಕ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮಾಡಲಾಗದಂತಹ ಪದಕ ಸಾಧನೆಯನ್ನು ಮಾಡಿದೆ.
ಹೌದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತೀಯರು ಒಟ್ಟು 7 ಪದಕಗಳನ್ನು ತಮ್ಮದಾಗಿಸಿಕೊಳ್ಳುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಒಂದೆಡೆ ಒಲಿಂಪಿಕ್ಸ್ ಆರಂಭವಾದಾಗಿನಿಂದಲೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಯಾವುದೇ ಅಥ್ಲೀಟ್ ಕೂಡ ಚಿನ್ನದ ಪದಕವನ್ನು ಗೆದ್ದಿರಲಿಲ್ಲ. ಆದರೆ ಈ ಬಾರಿ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದರ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆದರು.
ಹೀಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ 7 ಕ್ರೀಡಾಪಟುಗಳಿಗೆ ವಿವಿಧ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ಭಿನ್ನವಿಭಿನ್ನವಾದ ಗೌರವಧನ ಮತ್ತು ಹುದ್ದೆಗಳನ್ನು ಘೋಷಿಸುವುದರ ಮೂಲಕ ಪದಕ ಗೆದ್ದ ಕ್ರೀಡಾಪಟುಗಳಿಗೆ ಗೌರವವನ್ನು ಸಲ್ಲಿಸಿದರು. ಹಾಗೂ ಕೊನೆಯ ಹಂತದಲ್ಲಿ ಪದಕವನ್ನು ಗೆಲ್ಲುವಲ್ಲಿ ಎಡವಿದ್ದ ಕ್ರೀಡಾಪಟುಗಳಿಗೆ ಭಾರತದ ಮೋಟಾರು ವಾಹನ ದೈತ್ಯ ಸಂಸ್ಥೆ ಟಾಟಾ ಮೋಟಾರ್ಸ್ ಆಲ್ಟ್ರೋಜ್ ಚಿನ್ನದ ಬಣ್ಣದ ಕಾರುಗಳನ್ನು ಉಡುಗೊರೆಯಾಗಿ ನೀಡುವುದರ ಮೂಲಕ ಆ ಕ್ರೀಡಾಪಟುಗಳು ಪಟ್ಟ ಶ್ರಮಕ್ಕೆ ಗೌರವವನ್ನು ಸಲ್ಲಿಸಲಾಗಿತ್ತು.
ಇದೀಗ ಕರ್ನಾಟಕದ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋಟ್ ಕೂಡ ಕರ್ನಾಟಕದಿಂದ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ವಿಶೇಷ ಗೌರವ ಧನವನ್ನು ನೀಡುವುದರ ಮೂಲಕ ಅವರು ಪಟ್ಟ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಹೌದು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ ಕ್ರೀಡಾಪಟುಗಳಾದ ಅದಿತಿ ಅಶೋಕ್ ( ಗಾಲ್ಫ್ ), ಫಾವದ್ ಮಿರ್ಜಾ ( ಈಕ್ವೆಸ್ಟ್ರಿಯನ್ ) ಹಾಗೂ ಶ್ರೀಹರಿ ನಟರಾಜ್ ( ಈಜು ) ಈ ಮೂವರಿಗೆ ತಲಾ ೧ ಲಕ್ಷ ರೂಪಾಯಿ ಗೌರವಧನವನ್ನು ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋಟ್ ಅವರು ಘೋಷಣೆ ಮಾಡಿದ್ದಾರೆ. ಪದಕ ಗೆಲ್ಲದಿದ್ದರೂ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದರ ಮೂಲಕ ನಾಡಿನ ಹಲವಾರು ಯುವ ಜನತೆಯಲ್ಲಿ ಕ್ರೀಡಾ ಸ್ಫೂರ್ತಿ ತುಂಬಿದ ಕಾರಣಕ್ಕೆ ಈ ವಿಶೇಷ ಗೌರವ ಧನವನ್ನು ನೀಡಲಾಗುತ್ತಿದೆ.
ಭಾರತೀಯರ ಒಲಿಂಪಿಕ್ಸ್ ದಾಖಲೆ
ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಹಿಂದೆಂದೂ ತಲುಪದ ಹಂತವನ್ನು ಭಾರತ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಮೂಲಕ ತಲುಪಿದ್ದು ಇದೇ ಮೊದಲ ಬಾರಿಗೆ 7 ಪದಕಗಳನ್ನು ತನ್ನದಾಗಿಸಿಕೊಂಡು ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಭಾರತದ ಪರ ಜಾವೆಲಿನ್ ಥ್ರೋ ಪುರುಷರ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ , ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ, ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ರವಿ ದಾಹಿಯಾ ಬೆಳ್ಳಿ, ಭಾರತದ ಪುರುಷರ ಹಾಕಿ ತಂಡ ಕಂಚು, ಮಹಿಳಾ ವೆಲ್ಟರ್ ವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಲವ್ಲಿನಾ ಬೋರ್ಗೊಹೈನ್ ಕಂಚು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧೂ ಕಂಚು ಮತ್ತು ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕರ್ನಾಟಕದಿಂದ ಇತರ ಕ್ರೀಡಾಪಟುಗಳಿಗೆ ಸಿಕ್ಕ ಗೌರವ:
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಐತಿಹಾಸಿಕ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಗೋಲ್ಡನ್ ಪಾಸ್ ಸಿಕ್ಕಿದೆ. ಐತಿಹಾಸಿಕ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾಗೆ ಉಚಿತ ಗೋಲ್ಡನ್ ಪಾಸ್ ನೀಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕೃತವಾಗಿ ಘೋಷಣೆ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಲಾಗುವ ಈ ಗೋಲ್ಡನ್ ಪಾಸ್ ಬಳಸಿಕೊಂಡು ನಿಗಮದ ಯಾವುದೇ ಬಸ್ಸುಗಳಲ್ಲಿ ರಾಜ್ಯ ಮತ್ತು ಅಂತಾರಾಜ್ಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇನ್ನು ಈ ಗೋಲ್ಡನ್ ಪಾಸ್ ಬಳಸಿ ಜೀವಿತಾವಧಿವರೆಗೆ ನೀರಜ್ ಚೋಪ್ರಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.