ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯದಿಂದ ಸಿಕ್ಕ ವಿಶೇಷ ಗೌರವಗಳು ಯಾವುವು ಗೊತ್ತಾ?

ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಭಾನುವಾರ ( ಆಗಸ್ಟ್ 8 ) ತೆರೆ ಬಿದ್ದಿದ್ದು ಈ ಬಾರಿಯೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. 39 ಚಿನ್ನದ ಪದಕಗಳು ಸೇರಿದಂತೆ ಒಟ್ಟು 113 ಪದಕಗಳನ್ನು ತನ್ನದಾಗಿಸಿಕೊಂಡಿರುವ ಯುಎಸ್ಎ ಅಗ್ರಸ್ಥಾನದಲ್ಲಿದ್ದರೆ 7 ಪದಕಗಳನ್ನು ಪಡೆದುಕೊಂಡಿರುವ ಭಾರತ 48ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತ ಯಾವುದೇ ಚಿನ್ನದ ಪದಕವನ್ನು ಕೊನೆಯ ಹಂತದವರೆಗೂ ಗೆದ್ದಿರಲಿಲ್ಲ, ಆದರೆ ಶನಿವಾರ (ಆಗಸ್ಟ್ 7) ನಡೆದ ಜಾವೆಲಿನ್ ಥ್ರೋ ಪುರುಷರ ವಿಭಾಗದ ಫೈನಲ್ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ದೊಡ್ಡ ಇತಿಹಾಸವನ್ನೇ ನಿರ್ಮಿಸಿದರು.
ಹೌದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರತದ ಅಥ್ಲೀಟ್ ಒಬ್ಬರು ಚಿನ್ನದ ಪದಕವನ್ನು ಗೆದ್ದ ಸಾಧನೆಯನ್ನು ನೀರಜ್ ಚೋಪ್ರಾ ತಮ್ಮ ಹೆಸರಿನಲ್ಲಿ ಸೃಷ್ಟಿಸಿದರು. ಒಲಿಂಪಿಕ್ಸ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಭಾರತದ ಯಾವುದೇ ಕ್ರೀಡಾಪಟು ಸಹ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿರಲಿಲ್ಲ, ಆದರೆ ಇದೀಗ ನೀರಜ್ ಚೋಪ್ರಾ ಆ ಸಾಧನೆಯನ್ನು ಮಾಡುವುದರ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.
ಹೀಗೆ ಇಡೀ ದೇಶವೇ ಹೆಮ್ಮೆ ಪಡುವಂತಹ ಇತಿಹಾಸ ನಿರ್ಮಿಸಿ ಭಾರತದ ಕೀರ್ತಿ ಪತಾಕೆಯನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ಹಾರಿಸಿದ ನೀರಜ್ ಚೋಪ್ರಾಗೆ ದೇಶದ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪೆನಿಗಳು ಹಲವಾರು ಬಹುಮಾನ ಮತ್ತು ನಗದು ಪುರಸ್ಕಾರಗಳನ್ನು ಘೋಷಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾಗೆ ಗೌರವವನ್ನು ಸಲ್ಲಿಸಿವೆ. ಹೀಗೆ ಇತಿಹಾಸ ನಿರ್ಮಿಸಿರುವ ಬಂಗಾರದ ಹುಡುಗ ನೀರಜ್ ಚೋಪ್ರಾಗೆ ನಮ್ಮ ಕರ್ನಾಟಕ ರಾಜ್ಯದಿಂದಲೂ ಸಹ ಕೆಲವೊಂದಷ್ಟು ಗೌರವಗಳು ಸಂದಿವೆ. ನಮ್ಮ ರಾಜ್ಯದಿಂದ ನೀರಜ್ ಚೋಪ್ರಾಗೆ ಸಿಕ್ಕ ಗೌರವಗಳ ಪಟ್ಟಿ ಮುಂದೆ ಇದೆ ಓದಿ..

ಕೆಎಸ್ಆರ್ಟಿಸಿಯಿಂದ ಜೀವಿತಾವಧಿ ಗೋಲ್ಡನ್ ಪಾಸ್
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಐತಿಹಾಸಿಕ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಗೋಲ್ಡನ್ ಪಾಸ್ ಸಿಕ್ಕಿದೆ. ಐತಿಹಾಸಿಕ ದಾಖಲೆ ನಿರ್ಮಿಸಿರುವ ನೀರಜ್ ಚೋಪ್ರಾಗೆ ಉಚಿತ ಗೋಲ್ಡನ್ ಪಾಸ್ ನೀಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕೃತವಾಗಿ ಘೋಷಣೆ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೀಡಲಾಗುವ ಈ ಗೋಲ್ಡನ್ ಪಾಸ್ ಬಳಸಿಕೊಂಡು ನಿಗಮದ ಯಾವುದೇ ಬಸ್ಸುಗಳಲ್ಲಿ ರಾಜ್ಯ ಮತ್ತು ಅಂತಾರಾಜ್ಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇನ್ನು ಈ ಗೋಲ್ಡನ್ ಪಾಸ್ ಬಳಸಿ ಜೀವಿತಾವಧಿವರೆಗೆ ನೀರಜ್ ಚೋಪ್ರಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.

ಭಟ್ಕಳದ ಹೋಟೆಲ್ನಲ್ಲಿ ಉಚಿತ ಮತ್ತು ಅನ್ಲಿಮಿಟೆಡ್ ಊಟ
ಒಲಿಂಪಿಕ್ಸ್ನಲ್ಲಿ ಬಂಗಾರದ ಬರ ನೀಗಿಸಿದ ಭಾರತದ ಹೆಮ್ಮೆಯ ನೀರಜ್ ಚೋಪ್ರಾಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿನ ಹೋಟೆಲ್ವೊಂದು ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿ ಗೌರವವನ್ನು ಸಲ್ಲಿಸಿದೆ. ಭಟ್ಕಳದಲ್ಲಿನ ತಾಮ್ರ ಎಂಬ ಹೋಟೆಲ್ನಲ್ಲಿ ನೀರಜ್ ಎಂದು ಹೆಸರಿರುವ ವ್ಯಕ್ತಿಗಳಿಗೆ ಉಚಿತ ಮತ್ತು ಅನ್ಲಿಮಿಟೆಡ್ ಊಟ ನೀಡಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಭಟ್ಕಳದ ತಾಮ್ರ ಹೋಟೆಲ್ ಮಾಲೀಕರಾದ ಆಶಿಶ್ ನಾಯ್ಕ್ ಈ ನಿರ್ಧಾರವನ್ನು ಕೈಗೊಂಡಿದ್ದು ನೀರಜ್ ಎಂಬ ಹೆಸರಿನವರು ಯಾರೇ ತಮ್ಮ ಹೋಟೆಲ್ಗೆ ಬಂದು ಅವರ ಯಾವುದಾದರೂ ಗುರುತಿನ ಚೀಟಿ, ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆ ತೋರಿಸಿದರೂ ಸಹ ಅವರಿಗೆ ಈ ಉಚಿತ ಮತ್ತು ಅನ್ಲಿಮಿಟೆಡ್ ಊಟವನ್ನು ನೀಡಲಾಗುವುದು ಎಂದು ಹೋಟೆಲ್ ಮಾಲೀಕ ಆಶಿಶ್ ನಾಯ್ಕ್ ಹೇಳಿದ್ದಾರೆ.

ನೀರಜ್ ಚೋಪ್ರಾ ಮಾಜಿ ತರಬೇತುದಾರನಿಗೆ 10 ಲಕ್ಷ ನಗದು ಪುರಸ್ಕಾರ
ಕೇವಲ ನೀರಜ್ ಚೋಪ್ರಾಗೆ ಮಾತ್ರವಲ್ಲದೆ ಈ ಹಿಂದೆ ನೀರಜ್ ಚೋಪ್ರಾಗೆ ತರಬೇತಿಯನ್ನು ನೀಡಿದ್ದ ಕರ್ನಾಟಕದ ಶಿರಸಿ ಮೂಲದ ಜಾವೆಲಿನ್ ಥ್ರೋ ತರಬೇತುದಾರ ಕಾಶಿನಾಥ್ ನಾಯ್ಕ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ನಗದು ಪುರಸ್ಕಾರವನ್ನು ಘೋಷಣೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿದೆ. 2015ರಿಂದ 2019ರ ಆರಂಭದವರೆಗೂ ನೀರಜ್ ಚೋಪ್ರಾಗೆ ತರಬೇತಿಯನ್ನು ನೀಡಿದ್ದ ಶಿರಸಿ ಮೂಲದ ಕಾಶಿನಾಥ್ ನಾಯ್ಕ್ ಅವರಿಗೆ ರಾಜ್ಯದ ಕ್ರೀಡಾ ಮಂತ್ರಿಗಳಾದ ಕೆ ಸಿ ನಾರಾಯಣಗೌಡ 10 ಲಕ್ಷ ನಗದು ಪುರಸ್ಕಾರವನ್ನು ನೀಡುವುದಾಗಿ ಭಾನುವಾರ ಘೋಷಣೆ ಮಾಡಿದ್ದಾರೆ. ನೀರಜ್ ಚೋಪ್ರಾ ಚಿನ್ನ ಗೆದ್ದ ಬೆನ್ನಲ್ಲೇ ವಿಡಿಯೋ ಮಾಡುವ ಮೂಲಕ ಕಾಶಿನಾಥ್ ನಾಯ್ಕ್ ಸಂತಸವನ್ನು ವ್ಯಕ್ತ ಪಡಿಸಿದ್ದರು. ತಾವು ತರಬೇತಿ ನೀಡಿದ ಹುಡುಗ ಇಂದು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿರುವುದು ಸಂತಸ ತಂದಿದೆ ಮತ್ತು ಅಂಥ ಕ್ರೀಡಾಪಟುವಿಗೆ ತರಬೇತಿ ನೀಡಿದ್ದು ತುಂಬ ಹೆಮ್ಮೆ ನೀಡಿದೆ ಎಂದು ಕಾಶಿನಾಥ್ ನಾಯ್ಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಕನ್ನಡತಿ ಅದಿತಿ ಅಶೋಕ್ಗೂ ಗೋಲ್ಡನ್ ಪಾಸ್ ಘೋಷಿಸಿದ ಕೆಎಸ್ಆರ್ಟಿಸಿ
ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜೀವಿತಾವಧಿ ಗೋಲ್ಡನ್ ಪಾಸ್ ಘೋಷಿಸಿದ್ದು ಮಾತ್ರವಲ್ಲದೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲದೇ ಇದ್ದರೂ ಗಾಲ್ಫ್ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕರ್ನಾಟಕ ಮೂಲದ ಕ್ರೀಡಾಪಟು ಅದಿತಿ ಅಶೋಕ್ಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗೋಲ್ಡನ್ ಪಾಸ್ ಘೋಷಣೆ ಮಾಡಿದೆ. ಕೊನೆಯ ಘಟ್ಟದಲ್ಲಿ ಪದಕ ಗೆಲ್ಲುವ ಅವಕಾಶವನ್ನು ಕೈ ತಪ್ಪಿಸಿಕೊಂಡ ಕರ್ನಾಟಕದ ಕುವರಿ ಅದಿತಿ ಅಶೋಕ್ ಒಲಿಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ, ಅದಿತಿ ಅಶೋಕ್ ಮಾಡಿರುವ ಈ ಸಾಧನೆಯನ್ನು ಉಚಿತ ಗೋಲ್ಡನ್ ಪಾಸ್ ನೀಡುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಭ್ರಮಿಸುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಶಿವಯೋಗಿ ಸಿ ಕಳಸದ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications