ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕ ಗೆದ್ದಿರುವ ಅಥ್ಲೀಟ್ ನೀರಜ್ ಚೋಪ್ರಾಗೆ ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಬಂಪರ್ ಆಫರ್ಗಳೂ ಬರುತ್ತಿವೆ. ಯಾಕೆಂದರೆ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕ ಬಂದಿರಲಿಲ್ಲ. ಅದೂ ಈ ಬಾರಿ ಬಂಗಾರದ ಪದಕ ಬಂದಿರುವುದು ಹೊಸ ದಾಖಲೆಯಾಗಿದೆ.
ಅಭ್ಯಾಸಕ್ಕೆ ಸಹಾಯ ನೀಡಿದ ಟ್ರಕ್ ಡ್ರೈವರ್ಗಳಿಗೆ ಗೌರವಿಸಿದ ಮೀರಾಬಾಯಿ ಚಾನು
ಶನಿವಾರ (ಆಗಸ್ಟ್ 7) ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಚಿನ್ನದ ಪದಕದ ಎಸೆತದ ಸಾಧನೆ ತೋರಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕವಿದು ಮತ್ತು ಚೊಚ್ಚಲ ಬಂಗಾರದ ಪದಕವಿದು.
ದೇಶಕ್ಕೆ ಬಂಗಾರದ ಸಂಭ್ರಮ ತರುವ ಮೂಲಕ ಪದಕ ಪಟ್ಟಿಯಲ್ಲಿ ಭಾರತವನ್ನು ಮೇಲಕ್ಕೇರಿಸಿರುವ ನೀರಜ್ ಚೋಪ್ರಾಗೆ ಹರ್ಯಾಣ ಸರ್ಕಾರ ಈಗಾಗಲೇ 6 ಕೋಟಿ ನಗದು ಪುರಸ್ಕಾರ ಮತ್ತು ಗ್ರೇಡ್ 'ಎ' ಸರ್ಕಾರಿ ನೌಕರಿಯನ್ನು ಘೋಷಿಸಿದೆ. ಭಾರತದ ಖ್ಯಾತ ಮೋಟಾರ್ ಸಂಸ್ಥೆ ಆನಂದ್ ಮಹೀಂದ್ರದಿಂದಲೂ ನೀರಜ್ಗೆ ಭರ್ಜರಿ ಆಫರ್ ಬಂದಿದೆ.
ಟೋಕಿಯೋ ಒಲಿಂಪಿಕ್ಸ್: ಬಜರಂಗ್ ಪುನಿಯಾ ಅಬ್ಬರ; ಭಾರತಕ್ಕೆ ಮತ್ತೊಂದು ಪದಕ
ಚೋಪ್ರಾ ದೇಶಕ್ಕೆ ಬಂಗಾರ ಗೆದ್ದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ್ದ ಮಹೀಂದ್ರ ಸಂಸ್ಥೆಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರ ಅವರು, 'ಹೌದು, ಇದೊಂದು ಒಳ್ಳೆಯ ನಿರ್ಧಾರ. ಗೋಲ್ಡನ್ ಅಥ್ಲೀಟ್ ನೀರಜ್ ಚೋಪ್ರಾಗೆ ಎಕ್ಸ್ಯುವಿ 700 ವಾಹನ ನೀಡಲು ಈ ಸಂದರ್ಭವನ್ನು ವೈಯಕ್ತಿಕವಾಗಿ ನಾನು ಬಳಸಿಕೊಳ್ಳುತ್ತೇನೆ. ನೀರಜ್ಗೆ ಒಂದು ವಾಹನ ತಯಾರಿಡಿ' ಎಂದು ಬರೆದುಕೊಂಡಿದ್ದಾರೆ.