
ಟೋಕಿಯೋ ಒಲಿಂಪಿಕ್ಸ್ ಶುಕ್ರವಾರ ಜಪಾನ್ನ ಟೋಕಿಯೋ ನಗರದಲ್ಲಿ ಉದ್ಘಾಟನೆಯಾಗಲಿದೆ. ಕೊರೊನಾವೈರಸ್ನ ಭೀತಿಯಿಂದಾಗಿ ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಹಿಂದಿನಂತೆ ಪೂರ್ಣ ಪ್ರಮಾಣದ ಕ್ರೀಡಾಪಟುಗಳ ತಂಡ ಭಾಗವಹಿಸುವುದಿಲ್ಲ. ಕನಿಷ್ಠ ಆಟಗಾರರ ತಂಡದೊಂದಿಗೆ ಭಾರತ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದೆ.
ಕೊರೊನಾವೈರಸ್ ಪ್ರಕರಣಗಳು ಟೋಕಿಯೋದ ಕ್ರೀಡಾಗ್ರಾಮದಲ್ಲಿಯೂ ಬೆಳಕಿಗೆ ಬರುತ್ತಿದೆ. ಹೀಗಾಗಿ ಆಟಗಾರರು ಈ ಮಾರಕ ವೈರಸ್ನಿಂದ ದೂರವಿರಲು ಉದ್ಘಾಟನಾ ಸಮಾರಂಭಕ್ಕೆ ಕಡಿಮೆ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ಕಳುಹಿಸಲಿದೆ. "ನಾವು ಕ್ರೀಡಾಪಟುಗಳನ್ನು ಅಪಾಯಕ್ಕೆ ತಳ್ಳುವಂತಾ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಲು ಬಯಸುವುದಿಲ್ಲ. ಈ ಕ್ಷಣಕ್ಕೆ ನಿರ್ದಿಷ್ಟವಾಗಿ ಎಷ್ಟು ಮಂದಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ ಎಂದು ಸ್ಪಷ್ಟವಾಗಿಲ್ಲ. ಶೀಗ್ರದಲ್ಲಿ ಆ ವಿಚಾರವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ನ ಸೆಕ್ರೇಟರಿ ಜನರಲ್ ರಾಜೀವ್ ಮೆಹ್ತಾ ಹೇಳಿಕೆ ನೀಡಿದ್ದಾರೆ.
ಮರುದಿನ ಸ್ಪರ್ಧಾಕಣಕ್ಕೆ ಇಳಿಯಲಿರುವ ಕ್ರೀಡಾಪಟುಗಳು ಈ ಸಮಾರಂಭದಿಂದ ಹೊರಗುಳಿಯಲು ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಹೀಗಾಗಿ ಮೊದಲ ದಿನದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ 10ಎಂ ಏರ್ ಪಿಸ್ತೂಲ್ ಶೂಟರ್ಗಳಾದ ಸೌರಭ್ ಚೌಧರಿ, ಅಭಿಶೇಕ್ ವರ್ಮಾ, ಅಪೂರ್ವಿ ಚಂಡೇಲಾ ಮತ್ತು ಎಲವೆನಿಲ್ ವಲರಿವನ್ ಈ ಸಮಾರಂಭದಿಂದ ಹೊರಗುಳಿಯಲಿದ್ದಾರೆ. ಮನು ಭಾಕರ್, ಯಶಸ್ವಿನಿ ಸಿಂಗ್ ದೇಸ್ವಾಲ್, ದೀಪಕ್ ಕುಮಾರ್ ಮತ್ತು ದಿವ್ಯಾನ್ಶ್ ಸಿಂಗ್ ಪನ್ವಾರ್ ಕೂಡ ಎರಡನೇ ದಿನದಲ್ಲಿ ಸ್ಪರ್ಧೆಗಿಳಿಯುವ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಗವಹಿಸದಿರುವುದು ಈಗಾಗಲೇ ಸ್ಪಷ್ಟವಾಗಿದೆ.
ಇನ್ನು ಉದ್ಘಾಟನಾ ಸಮಾರಂಭದ ಮರುದಿನ ಬಾಕ್ಸರ್ಗಳು, ಆರ್ಚರ್ಗಳು ಮತ್ತು ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡ ಕೂಡ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ. ಆದರೆ ಭಾರತೀಯ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಮೇರಿಕೋಮ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿಯುವ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರಲ್ಲಿ ಮೇರಿ ಕೋಮ್ ಮೊದಲ ದಿನದ ಸ್ಪರ್ಧಾಕಣಕ್ಕದಲ್ಲಿ ಇರುವುದಿಲ್ಲ. ಆದರೆ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಹಂತದ ಸ್ಪರ್ಧೆಯನ್ನು ಎದುರಿಸಲಿದೆ.
ಭಾರತ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇತಿಹಾಸದಲ್ಲಿ ಇತಿದೊಡ್ಡ ತಂಡವನ್ನು ಒಲಿಂಪಿಕ್ಸ್ಗೆ ಕಳುಹಿಸಿದೆ. 125ಕ್ಕೂ ಅಧಿಕ ಕ್ರೀಡಾಪಟುಗಳು ಈ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ. ಇತರ ಸಿಬ್ಬಂಧಿಗಳು ಹಾಗೂ ಕೋಚ್ಗಳು ಸೇರಿದಂತೆ ಭಾರತ ಈ ಬಾರಿ 228 ಜನರ ಬೃಹತ್ ತಂಡದೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ