ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಈ ಮಹತ್ವದ ಕ್ರೀಡಾಕೂಟದಲ್ಲಿ ಭಾಗಿಯಾಗಲಿರುವ ಭಾರತೀಯ ಅಥ್ಲೀಟ್ ಗಳ ಮೊದಲ ತಂಡ ದೆಹಲಿಯಿಂದ ಟೋಕಿಯೋಗೆ ಪ್ರಯಾಣ ಬೆಳೆಸಿದೆ. ಈ ತಂಡಕ್ಕೆ ದೆಹಲಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಬೀಳ್ಕೊಡುಗೆ ನೀಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಭಾರತದಿಂದ ಟೋಕಿಯೋಗೆ ತೆರಳಲಿರುವ ಅಥ್ಲೀಟ್ ಗಳ ಮೊದಲ ತಂಡಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಅಧಿಕೃತ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
54 ಅಥ್ಲೀಟ್ಗಳು, ಪೂರಕ ಸಿಬ್ಬಂದಿ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಪ್ರತಿನಿಧಿಗಳನ್ನೊಳಗೊಂಡ 88 ಮಂದಿಯ ತಂಡ ಮೊದಲ ತಂಡದಲ್ಲಿ ಟೋಕಿಯೋಗೆ ಹಾರಾಟವನ್ನು ನಡೆಸಲಿದ್ದಾರೆ. ಈ ತಂಡಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಅಧಿಕೃತ ಬೀಳ್ಕೊಡುಗೆ ನೀಡಿದ್ದಾರೆ. ಇವರ ಜೊತೆ ಐಒಎ ಅಧ್ಯಕ್ಷರಾದ ಶ್ರೀ ನರಿಂದರ್ ಧೃವ್ ಬಾತ್ರಾ, ಐಒಎ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೀವ್ ಮೆಹ್ತಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಶ್ರೀ ಸಂದೀಪ್ ಪ್ರಧಾನ್ ಅವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಜೂಡೊ, ಜಿಮ್ನಾಸ್ಟಿಕ್, ವೇಟ್ ಲಿಫ್ಟಿಂಗ್ ಸೇರಿ ಎಂಟು ಬಗೆಯ ಕ್ರೀಡೆಗಳ ಅಥ್ಲೀಟ್ ಗಳು ಹಾಗೂ ಅವರ ಪೂರಕ ಸಿಬ್ಬಂದಿ ಮತ್ತು ಹಾಕಿ ಆಟಗಾರರ ದೊಡ್ಡ ತಂಡದಲ್ಲಿ ಜಪಾನ್ಗೆ ಪ್ರಯಾಣಿಸುತ್ತಿದ್ದಾರೆ.
ಅಥ್ಲೀಟ್ ಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಮಾರಂಭದಲ್ಲಿ ಭಾಗವಹಿಸುವ ಎಲ್ಲ ಗಣ್ಯರು, ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಲಾಗಿದೆ. ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ನೆಗೆಟಿವ್ ವರದಿಯನ್ನು ಪಡೆದುಕೊಂಡ ನಂತರವೇ ಎಲ್ಲಾ ಆಟಗಾರರು ಟೋಕಿಯೋಗೆ ಹಾರಲು ಸಜ್ಜಾಗಿದ್ದಾರೆ. ಕೊರೊನಾವೈರಸ್ ಹಿನ್ನೆಲೆಯಲ್ಲಿ ಕ್ರೀಡಾಕೂಟದಲ್ಲಿಯೂ ಕೂಡ ಸಾಕಷ್ಟು ಎಚ್ಚರಿಕೆಯನ್ನು ವಹಿಸಿಕೊಳ್ಳಾಗಿದೆ.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ಗೆ ಭಾರತದಿಂದ 127 ಭಾರತೀಯ ಅಥ್ಲೀಟ್ ಗಳು ಆಯ್ಕೆಯಾಗಿದ್ದು ಇದು ದಾಖಲೆಯಾಗಿದೆ. ಕಳೆದ ರಿಯೊ ಒಲಿಂಪಿಕ್ಸ್ ಗೆ ಒಟ್ಟಾರೆ 117 ಮಂದಿ ಅರ್ಹತೆ ಪಡೆದಿದ್ದರು.