ಭಾರತದ ಭರವಸೆಯ ಕುಸ್ತಿ ಪಟು ವಿನೇಶ್ ಪೋಗಟ್ ಅವರು ಮಹಿಳೆಯರ 50 ಕೆ.ಜಿ. ಫ್ರಿ ಸ್ಟೈಲ್ ವಿಭಾಗದಲ್ಲಿ ಫೈನಲ್ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ, ಫೈನಲ್ ಪಂದ್ಯದ ದಿನ ಬುಧವಾರ ಅವರ ತೂಕ ಹೆಚ್ಚಾಗಿದ್ದರಿಂದ ಅವರನ್ನು ಅನರ್ಹ ಗೊಳಿಸಲಾಯಿತು. ಈ ಸುದ್ದಿ ದೇಶದಲ್ಲಿ ವ್ಯಾಪಕವಾಗಿ ಹಬ್ಬಿತು. ಅಲ್ಲದೆ ಎಲ್ಲ ಪಕ್ಷಗಳು ಸಹ ಸ್ಟಾರ್ ಕುಸ್ತಿ ಪಟುವಿನ ಬೆನ್ನಿಗೆ ನಿಂತವು.
ಇದೇ ವಿಷಯ ಬುಧವಾರ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರಿದ್ದವು. ಕೆಲವು ಮುಖಂಡರು ಇದನ್ನು ಪಿತೂರಿ ಎಂದು ಕರೆದರೆ, ಇನ್ನು ಕೆಲವರು ನಿರ್ಲಕ್ಷ್ಯ ಎಂದು ದೂರಿದ್ದಾರೆ. ಈ ವೇಳೆ ವಿನೇಶ್ ಪೋಗಟ್ ಮೌನ ಮುರಿದಿದ್ದಾರೆ.

ಬುಧವಾರ ಫೈನಲ್ಗೂ ಮುನ್ನ ಅನರ್ಹವಾಗುತ್ತಿದ್ದಂತೆ ವಿನೇಶ್ ಪೋಗಟ್ ಅವರು ಡಿಹ್ಯಾಡ್ರೆಷನ್ನಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಭಾರತ ಒಲಿಂಪಿಕ್ಸ್ ಅಧ್ಯಕ್ಷ ಪಿಟಿ ಉಷಾ ಸೇರಿದಂತೆ ಅನೇಕ ಅಧಿಕಾರಿಗಳು, ವಿನೇಶ್ ಅವರನ್ನು ಭೇಟಿ ಮಾಡಿದ್ದರು. ಮಹಿಳಾ ರಾಷ್ಟ್ರೀಯ ತರಬೇತುದಾರರಾದ ವೀರೇಂದ್ರ ದಹಿಯಾ ಮತ್ತು ಮಂಜೀತ್ ರಾಣಿ ಅವರು ವಿನೇಶ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ವೀರೇಂದ್ರ ದಹಿಯಾ, ವಿನೇಶ್ ಅವರನ್ನು ಅನರ್ಹ ಗೊಳಿಸಿದ್ದರಿಂದ ಭಾರತೀಯ ಅಥ್ಲೀಟ್ಗಳಲ್ಲಿ ಬೇಸರ ಮನೆ ಮಾಡಿತ್ತು. ವಿನೇಶ್ ಅವರಿಗೂ ಎಲ್ಲರೂ ಧೈರ್ಯ ಹೇಳುವ ಕೆಲಸಕ್ಕೆ ಮುಂದಾದರು. ಆದರೆ ಅವಳು ಒಬ್ಬ ಗಟ್ಟಿ ಮಹಿಳೆ ಎಂದು ಕೋಚ್ ಇದೇ ವೇಳೆ ಹೇಳಿದರು.
ಒಲಿಂಪಿಕ್ಸ್ ಫೈನಲ್ನಿಂದ ಅನರ್ಹವಾಗುತ್ತಿದ್ದಂತೆ ವಿನೇಶ್ ತಮ್ಮ ಮನದಾಳದ ಮಾತನ್ನು ಕೋಚ್ ಮುಂದೆ ಹಂಚಿಕೊಂಡಿದ್ದಾರೆ. ನಾವು ಪದಕವನ್ನು ಗೆಲ್ಲುವ ಚಿನ್ನದಂತಹ ಅವಕಾಶವನ್ನು ಕೈ ಚೆಲ್ಲಿರುವುದು ದುರಾದೃಷ್ಟಕರ. ಆದರೆ ಇದೆಲ್ಲವೂ ಆಟದ ಒಂದು ಭಾಗವಾಗಿದೆ ಎಂದು ಹೇಳಿದರು.